ಔರಾದ್: ತಾಲ್ಲೂಕಿನ ಬಾವಲಗಾಂವ್ ಸರ್ಕಾರಿ ಉರ್ದು ಮಾಧ್ಯಮ ಶಾಲೆ 16 ಮಕ್ಕಳು ಹೊಟ್ಟೆ ನೋವಿನಿಂದ ಅಸ್ವಸ್ಥಗೊಂಡು ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಧ್ಯಾಹ್ನ ಊಟದ ನಂತರ ಈ ಮಕ್ಕಳು ವಾಂತಿ ಮಾಡಿಕೊಂಡಿದ್ದಾರೆ. ಆಗ ಶಿಕ್ಷಕರು ಮಕ್ಕಳಿಗೆ ಬಿಸಿ ನೀರು ಮತ್ತು ನಿಂಬೆ ರಸ ಕೂಡಿಸಿದ್ದಾರೆ. ಅದಾಗ್ಯೂ ಮಕ್ಕಳ ಹೊಟ್ಟೆ ನೋವು ಕಡಿಮೆಯಾಗದ ಕಾರಣ ಇಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದಾರೆ.
‘ಇಬ್ಬರು ಮಕ್ಕಳನ್ನು ಹೊರತುಪಡಿಸಿ ಎಲ್ಲ ಮಕ್ಕಳು ಚಿಕಿತ್ಸೆ ಸ್ಪಂದಿಸುತ್ತಿದ್ದಾರೆ. ಆ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಆಸ್ಪತ್ರೆಗೆ ಕಳುಹಿಸಲಾಗುವುದು’ ಎಂದು ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ. ರಮಣ ಪೋಲಕವಾರ ತಿಳಿಸಿದ್ದಾರೆ.
‘ಔಡಲ ಬೀಜ ತಿಂದು ಮಕ್ಕಳಿಗೆ ಹೀಗೆ ಆಗಿದೆ ಎಂದು ಶಿಕ್ಷಕರು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಪರಿಶೀಲನೆ ನಂತರವೇ ಕಾರಣ ಗೊತ್ತಾಗಲಿದೆ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಪಾಲಕರ ಆಕ್ರೋಶ: ‘ಶಿಕ್ಷಕರ ನಿರ್ಲಕ್ಷ್ಯದಿಂದ ಮಕ್ಕಳಿಗೆ ಹೀಗಾಗಿದೆ’ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ತಾ.ಪಂ ಸದಸ್ಯ ಹಣಮಂತ ನಾಯಿಕ್ ಆಗ್ರಹಿಸಿದ್ದಾರೆ.