ಬೆಂಗಳೂರು: ನಗರದ ಹೆಣ್ಣೂರಿನ ವಡ್ಡರಪಾಳ್ಯದ ಮನೆಯೊಂದಕ್ಕೆ ಮಂಗಳವಾರ ನುಗ್ಗಿದ ಕಳ್ಳರು, ಬೀರುವಿನಲ್ಲಿದ್ದ₹2.50 ಲಕ್ಷ ನಗದು ಹಾಗೂ
ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ.
ಎಂ.ಪಿ.ಜಾನ್ ಹಣ ಹಾಗೂ ಒಡವೆ ಕಳೆದುಕೊಂಡವರು. ಅವರು ಬೆಳಿಗ್ಗೆ 7.30ರ ಸುಮಾರಿಗೆ ಹೊರಗಡೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ತಿಳಿದ ಕಳ್ಳರು, ಹಿಂಬದಿ ಕಿಟಕಿಯ ಗ್ರಿಲ್ಸ್ ಕತ್ತರಿಸಿ ಒಳ ನುಗ್ಗಿದ್ದಾರೆ. ಬಳಿಕ ಬೀರುವನ್ನು ಒಡೆದು ಹಣ ಕದ್ದಿದ್ದಾರೆ.
ಬೆಳಿಗ್ಗೆ 10.30ರ ಸುಮಾರಿಗೆ ಜಾನ್, ಮನೆಗೆ ಹಿಂದಿರುಗಿದಾಗ ವಿಷಯ ಗೊತ್ತಾಗಿದೆ ಎಂದು ಹೆಣ್ಣೂರು ಪೊಲೀಸರು ತಿಳಿಸಿದರು.
‘ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳನ್ನು ವಶಕ್ಕೆ ಪಡೆದಿದ್ದೇವೆ. ಕಳ್ಳರ ಪತ್ತೆಗೆ ಪ್ರತ್ಯೇಕ ತಂಡ ರಚಿಸಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.