ನಾಸಿಕ್: 2013ರಲ್ಲಿ ಮಹಾರಾಷ್ಟ್ರದಲ್ಲಿ ನಡೆದಿದ್ದ ಮೂವರು ದಲಿತರ ಮರ್ಯಾದಾ ಹತ್ಯೆ ಪ್ರಕರಣ ಸಂಬಂಧ ಆರು ಮಂದಿ ತಪ್ಪಿತಸ್ಥರಿಗೆ ನಾಸಿಕ್ ಜಿಲ್ಲಾ ನ್ಯಾಯಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ.
ನ್ಯಾಯಮೂರ್ತಿ ಆರ್.ಆರ್ ವೈಷ್ಣವ್ ಅವರು ಆರು ಮಂದಿಗೆ ಗಲ್ಲು ಶಿಕ್ಷೆ ನೀಡಿದ್ದಾರೆ. ಅಲ್ಲದೇ ಪ್ರತಿಯೊಬ್ಬ ಅಪರಾಧಿಯು ₹20 ಸಾವಿರವನ್ನು ಸಂತ್ರಸ್ಥ ಕುಟುಂಬಕ್ಕೆ ನೀಡಬೇಕೆಂದು ಆದೇಶ ಹೊರಡಿಸಿರುವ ಬಗ್ಗೆ ಸರ್ಕಾರಿ ವಕೀಲ ಉಜ್ಚಲ್ ನಿಕಮ್ ತಿಳಿಸಿದ್ದಾರೆ.
ತಪ್ಪಿತಸ್ಥರನ್ನು ಪೊಪಟ್ ವಿ. ದರಂದಾಲೆ, ಗಣೇಶ್ ಪಿ. ದರಂದಾಲೆ, ಪ್ರಕಾಶ್ ವಿ. ದರಂದಾಲೆ, ರಮೇಶ್ ವಿ. ದರಂದಾಲೆ, ಅಶೋಕ್ ನವಗಿರೇ ಮತ್ತು ಸಂದೀಪ್ ಕುರ್ರೇ ಎಂದು ಗುರುತಿಸಲಾಗಿದೆ.
2013ರ ಜನವರಿ 1 ರಂದು ಮಹಾರಾಷ್ಟ್ರದ ಸೊನಾಯ್ ಜಿಲ್ಲೆಯಲ್ಲಿ ಸಚಿನ್ ಘರು, ಸಂದೀಪ್ ತನ್ವರ್, ರಾಹುಲ್ ಕಂಡಾರೆ ಎಂಬ ಮೂವರು ದಲಿತರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅವರ ಮೃತದೇಹ ಶೌಚಾಲಯ ಗುಂಡಿಯಲ್ಲಿ ಪತ್ತೆಯಾಗಿತ್ತು.