ಬೆಂಗಳೂರು: ಇಂದಿರಾ ನಗರದಲ್ಲಿ ರೂಫ್ಟಾಪ್ ಬಾರ್ ಮತ್ತು ರೆಸ್ಟೊರೆಂಟ್ ಹಾಗೂ ಪಬ್ಗಳನ್ನು ನಡೆಸುತ್ತಿರುವ ಕಟ್ಟಡ ಮಾಲೀಕರಿಗೆ ವಾಣಿಜ್ಯ ಪರವಾನಗಿ ಸೇರಿದಂತೆ ಕಟ್ಟಡಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಜ.30ರೊಳಗೆ ಹಾಜರುಪಡಿಸುವಂತೆ ಬಿಬಿಎಂಪಿ ಪೂರ್ವ ವಲಯ ಜಂಟಿ ಆಯುಕ್ತರು ಗಡುವು ನೀಡಿದ್ದಾರೆ.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜಂಟಿ ಆಯುಕ್ತ ಅಶೋಕ್ ಅವರು ಇಂದಿರಾ ನಗರದ ಎಂಟು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳು ಮತ್ತು ಬಾರ್ ಮಾಲೀಕರ ಸಭೆಯನ್ನು ಮಂಗಳವಾರ ನಡೆಸಿದರು.
ಮುಂದಿನ ಸಭೆಯನ್ನು ಮಂಗಳವಾರಕ್ಕೆ ನಿಗದಿಪಡಿಸಿ, ಅಷ್ಟರೊಳಗೆ ರೂಫ್ಟಾಪ್ ಬಾರ್ ಮತ್ತು ರೆಸ್ಟೊರೆಂಟ್ಗಳಿಗೆ ಸಂಬಂಧಿಸಿದ ವಾಣಿಜ್ಯ ಪರ
ವಾನಗಿ, ಕಟ್ಟಡ ನಕ್ಷೆ ಮಂಜೂರಾತಿ, ಮಾಲಿನ್ಯ ನಿಯಂತ್ರಣ ಮಂಡಳಿಯ ನಿರಾಕ್ಷೇಪಣ ಪತ್ರದ ದಾಖಲೆಗಳನ್ನು ಸಲ್ಲಿಸುವಂತೆ ಮಾಲೀಕರಿಗೆ ಸೂಚಿಸಿದರು.
‘ಇಂದಿರಾ ನಗರದ ವಸತಿ ಬಡಾವಣೆಯಲ್ಲಿ ರೂಫ್ಟಾಪ್ ಬಾರ್ ಮತ್ತು ರೆಸ್ಟೊರೆಂಟ್ಗಳು ಅನುಮತಿ ಇಲ್ಲದೆ ನಡೆಯುತ್ತಿವೆ. ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಲ್ಲ. ಅನಾಹುತ ಸಂಭವಿಸುವ ಆತಂಕವಿದೆ. ಅಲ್ಲದೆ, ತಡರಾತ್ರಿವರೆಗೂ ಅಬ್ಬರದ ಸಂಗೀತ ಇರುತ್ತದೆ. ಇವುಗಳನ್ನು ತಕ್ಷಣ ಬಂದ್ ಮಾಡಿಸಬೇಕು’ ಎಂದು ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಬಾರ್ ಮಾಲೀಕರ ಸಭೆ ನಡೆಸಿ, ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಇತ್ತೀಚೆಗಷ್ಟೆ ಆದೇಶ ನೀಡಿತ್ತು.
‘ವಸತಿ ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ರೂಫ್ಟಾಪ್ ಬಾರ್ ಮತ್ತು ರೆಸ್ಟೊರೆಂಟ್ ಹಾಗೂ ಪಬ್ಗಳು ಯಾವುದೇ ಪರವಾನಗಿ ಇಲ್ಲದೆ ನಡೆ
ಯುತ್ತಿವೆ. ಇವುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸುತ್ತಲೇ ಇದ್ದೇವೆ’ ಎಂದು ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಕುಮಾರ್ ಪಿಳ್ಳೈ ತಿಳಿಸಿದರು.