ನವದೆಹಲಿ: ಕಳೆದ ವರ್ಷ ಭಯೋತ್ಪಾದಕರ ದಾಳಿಯಿಂದ 52 ಅಮರನಾಥ ಯಾತ್ರಿಕರನ್ನು ರಕ್ಷಿಸಿದ್ದ ಗುಜರಾತ್ನ ಚಾಲಕ ಶೇಖ್ ಸಲೀಮ್ ಗಫರ್ಗೆ ಉತ್ತಮ್ ಜೀವನ್ ರಕ್ಷಾ ಪದಕ ನೀಡಿ ಗೌರವಿಸಲಾಗುತ್ತಿದೆ.
ನಾಗರಿಕರಿಗೆ ನೀಡಲಾಗುವ ಎರಡನೇ ಅತ್ಯುನ್ನತ ಗೌರವವಾದ ಉತ್ತಮ್ ಜೀವನ್ ರಕ್ಷಾ ಪದಕವನ್ನು ಚಾಲಕ ಶೇಖ್ ಸಲೀಮ್ ಗಫರ್ಗೆ ಜ. 26, ಗಣರಾಜ್ಯೋತ್ಸವ ದಿನದಂದು ಪ್ರದಾನ ಮಾಡಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.
ಕಳೆದ ವರ್ಷ ಜುಲೈ 10ರಂದು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಕರು ಇದ್ದ ಬಸ್ನ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾಗ ಚಾಲಕ ಶೇಖ್ ಸಲೀಮ್ ಗಫರ್ ತಮ್ಮ ಚಾಕಚಕ್ಯತೆ ಹಾಗೂ ಸಮಯಪ್ರಜ್ಞೆಯಿಂದ ವಾಹನವನ್ನು ಚಲಾಯಿಸಿ 52 ಯಾತ್ರಿಕರ ಜೀವ ರಕ್ಷಿಸಿದ್ದರು.
ಪದಕದ ಜತೆಗೆ ವಿಶೇಷ ಕಾರ್ಯಕ್ರಮದಲ್ಲಿ ₹1ಲಕ್ಷ ನಗದು ಪ್ರಶಸ್ತಿ ನೀಡಲಾಗುತ್ತದೆ.
ಈ ಗುಂಡಿನ ದಾಳಿಯಲ್ಲಿ ಗುಜರಾತ್ನ ಏಳು ಯಾತ್ರಾರ್ಥಿಗಳು ಮೃತಪಟ್ಟಿದ್ದರು ಹಾಗೂ 14 ಜನರು ಗಾಯಗೊಂಡಿದ್ದರು.