ಚಿಕ್ಕಮಗಳೂರು: ಕನ್ನಡ ಸಂಘಟನೆಗಳ ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತ ಬಳಿ ಉರುಳು ಸೇವೆ ನಡೆಸಿದರು. ಹೋರಾಟಗಾರರೊಬ್ಬರು ಕೇಶ ಮುಂಡನ ಮಾಡಿಸಿ ಪ್ರತಿಭಟಿಸಿದರು.
ಶಾಲಾ ಕಾಲೇಜುಗಳಿಗೆ ರಜೆ ಇಲ್ಲ
ಹಾಸನ: ಬಂದ್ ಹಿನ್ನೆಲೆ, ರಾಜಧಾನಿ, ಹೊರ ಜಿಲ್ಲೆಗಳಿಗೆ ಬಸ್ ಸಂಚಾರ ಇಲ್ಲ. ನಗರ ಸಾರಿಗೆ ಹಾಗೂ ಜಿಲ್ಲಾವ್ಯಾಪ್ತಿಯಲ್ಲಿ ಮಾತ್ರ ಬಸ್ ಸಂಚಾರ.
ಬೆಳಗ್ಗೆಯಿಂದಲೇ ಪ್ರಯಾಣಿಕರ ಪರದಾಟ, ಆಟೋ ಖಾಸಗಿ ವಾಹನ ಸಂಚಾರ ಯಥಾಸ್ಥಿತಿ ಇದೆ. ಶಾಲಾ ಕಾಲೇಜುಗಳಿಗೆ ರಜೆ ನೀಡಿಲ್ಲ.
ಹೊಸಪೇಟೆಯಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ
ಹೊಸಪೇಟೆ: ಇಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರಿಗೆ ಸಂಸ್ಥೆ ಬಸ್ ಸಂಚಾರ ಸ್ಥಗಿತಗೊಂಡಿದೆ.
ಎಂದಿನಂತೆ ಸಂತೆ ಆರಂಭವಾಗಿದೆ ಹಾಗೂ ಬಹುತೇಕ ಅಂಗಡಿ, ಹೋಟೆಲ್ಗಳು ತೆರೆದಿವೆ.
ಪೆಟ್ರೋಲ್ ಬಂಕ್, ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ.
ಚಿತ್ರ ಪ್ರದರ್ಶನ ಇಲ್ಲ
ತುಮಕೂರು: ಬಂದ್ ಪ್ರಯುಕ್ತ ತುಮಕೂರಿನಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನಗಳನ್ನು ಗುರುವಾರ ಬಂದ್ ಮಾಡಲಾಗಿದೆ. ಚಿತ್ರ ಮಂದಿರಗಳ ಮುಂದೆ ‘ಈ ದಿನ ಪ್ರದರ್ಶನ ಇಲ್ಲ’ ಎಂದು ಬೋರ್ಡ್ ಹಾಕಲಾಗಿದೆ.
ತುಮಕೂರಿನಲ್ಲಿ ಖಾಸಗಿ ಬಸ್ ಸಂಚಾರ 11 ಗಂಟೆಯ ಬಳಿಕ ಆರಂಭವಾಯಿತು. ತುಮಕೂರಿನಲ್ಲಿ ಬ್ಯಾಂಕ್ ಗಳು ಬಂದ್ ಅಗಿದ್ದವು
ಅಣಕು ಶವದ ಮೆರವಣಿಗೆ
ಹುಬ್ಬಳ್ಳಿ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಸದಸ್ಯರು ಅಣಕು ಶವದ ಮೇಲೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹೆಸರು ಬರೆದು ಮೆರವಣಿಗೆ ಮಾಡಿ ಪ್ರತಿಭಟನೆ ನಡೆಸಿದರು.
ಹಳೇ ಬಸ್ ನಿಲ್ದಾಣದಿಂದ ಬಸವವನದ ತನಕ ಅಣಕು ಶವದ ಮೆರವಣಿಗೆ ಮಾಡಿ ಕರ್ನಾಟಕ, ಗೋವಾ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪೊಲೀಸರೊಂದಿಗೆ ವಾಗ್ವಾದ
ಮಂಡ್ಯ: ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಪ್ರತಿಭಟನೆ. ರೈಲು ನಿಲ್ದಾಣ, ಅಂಚೆ ಕಚೇರಿ ಮುತ್ತಿಗೆಗೆ ಯತ್ನದಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಯಿತು.
ಖಾಸಗಿ ಶಾಲೆಗಳು ಭಾಗಶಃ ಬಂದ್
ಚಿತ್ರದುರ್ಗ: ಸರ್ಕಾರಿ ಶಾಲಾ, ಕಾಲೇಜುಗಳ ತರಗತಿ ನಡೆಯುತ್ತಿವೆ. ಭಾಗಶಃ ಖಾಸಗಿ ಶಾಲೆ ಕಾಲೇಜುಗಳು ಸ್ಥಗಿತಗೊಂಡಿವೆ. ಸರ್ಕಾರಿ ಕಚೇರಿಗಳು, ಬ್ಯಾಂಕ್ ಗಳು ಕಾರ್ಯನಿರ್ವಹಿಸುತ್ತಿವೆ.
ರಾಜ್ಯ ಸಾರಿಗೆ ಸಂಸ್ಥೆ ಬಸ್ ಗಳು ರಸ್ತೆಗಿಳಿಯಲಿಲ್ಲ. ಖಾಸಗಿ ವಾಹನಗಳು ಎಂದಿನಂತೆ ಸಂಚಾರ ನಡೆಸುತ್ತಿವೆ. ಸ್ವಯಂ ಪ್ರೇರಿತರಾಗಿ ಕೆಲವೊಂದು ಅಂಗಡಿಗಳನ್ನು ಮುಚ್ಚಲಾಗಿದೆ.
ವಿವಿಧ ಕನ್ನಡಪರ ಸಂಘಟನೆಗಳು ಎಂ.ಜಿ. ವೃತ್ತದಲ್ಲಿ ಪ್ರತಿಭಟನೆ ನಡೆಸಿವೆ.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಮುಂಜಾನೆ ಕರುನಾಡ ರಕ್ಷಣಾ ವೇದಿಕೆಯವರು ತಮಟೆ ಬಡಿಯುತ್ತಾ, ಗೋವಾ ಸರ್ಕಾರದವಿರುದ್ಧ ಘೋಷಣೆ ಕೂಗಿ, ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಭಾವಚಿತ್ರದೊಂದಿಗೆ ಅಣಕು ಶವಯಾತ್ರೆ ನಡೆಸಿ, ಪ್ರತಿಕೃತಿ ದಹನ ಮಾಡಿದರು.
ಪ್ರತಿಭಟನೆಗಳು ನಡೆಯುವ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ದೂರದೂರಿಗೆ ಹೋಗುವ ಕೆಎಸ್ಆರ್ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದರು. ವಿಶೇಷವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸುವವರಿಗೆ ತೀವ್ರ ತೊಂದರೆಯಾಗಿದೆ.
'ನಿನ್ನೆ ಬಸ್ ಸಂಚಾರ ಸ್ಥಗಿತಗೊಳ್ಳುವ ಅಧಿಕೃತ ಆದೇಶ ಇಲ್ಲದ ಹಿನ್ನೆಲೆಯಲಿ ಈ ಅವ್ಯವಸ್ಥೆಗೆ ಕಾರಣವಾಗಿದೆ' ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ರೈಲು ತಡೆದು ಪ್ರತಿಭಟನೆ: ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿಗೆ ಹೊರಟ ಪ್ಯಾಸೇಂಜರ್ ರೈಲು ತಡೆದು ಪ್ರತಿಭಟನೆ ರೈಲು ತಡೆದು ಪ್ರತಿಭಟನೆ ನಡೆಸಿದರು.
ಕರವೇ ಜಿಲ್ಲಾ ಅಧ್ಯಕ್ಷ ರಮೇಶ್ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ರೈಲು ಹಳಿ ಮೇಲೆ ನಿಂತು ಮೂವತ್ತು ನಿಮಿಷಕ್ಕೂ ಹೆಚ್ಚು ಕಾಲ ರೈಲು ಸಂಚಾರ ತಡೆದರು. ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿ ತೆರವುಗೊಳಿಸಿದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.