ಬೆಂಗಳೂರು: ಬಂದ್ ಅನ್ನು ಸರ್ಕಾರ ಪ್ರಾಯೋಜಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸುತ್ತಿದ್ದರೂ ಬೆಂಗಳೂರಿನ ಬಹುತೇಕ ಸಚಿವರು, ಅಧಿಕಾರಿಗಳು, ನೌಕರರಿಲ್ಲದೇ ಸರ್ಕಾರಿ ಕಚೇರಿಗಳು ಬಿಕೋ ಎನ್ನುತ್ತಿದ್ದವು.
ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ವಿಶ್ವೇಶ್ವರಯ್ಯ ಟವರ್ಗಳಲ್ಲಿರುವ ಕಚೇರಿಗಳಲ್ಲಿ ಶೇ 15ರಷ್ಟು ಮಾತ್ರ ಹಾಜರಾತಿ ಇತ್ತು. ವಿಧಾನಸೌಧಕ್ಕೆ ಬಂದ ಗೃಹ ಸಚಿವರೂ ಹೆಚ್ಚು ಹೊತ್ತು ಅಲ್ಲಿರಲಿಲ್ಲ. ಸತತ ನಾಲ್ಕು ದಿನಗಳ ರಜೆ ಅನುಭವಿಸಲು ನೌಕರರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ ಎನ್ನಲಾಗಿದೆ.
‘ನೌಕರರು ಕರ್ತವ್ಯಕ್ಕೆ ಹಾಜರಾಗದೇ ಬಂದ್ಗೆ ಪರೋಕ್ಷವಾಗಿ ಬೆಂಬಲಿಸಿದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂಬಂತಹ ಸುತ್ತೋಲೆಯನ್ನೇ ಹೊರಡಿಸದೆ ಇರುವುದನ್ನು ನೋಡಿದರೆ ಸರ್ಕಾರ ಬಂದ್ ಪರವಾಗಿರುವುದು ಸ್ಪಷ್ಟ’ ಎಂದು ಕರ್ತವ್ಯಕ್ಕೆ ಹಾಜರಾಗಿದ್ದ ಅಧಿಕಾರಿಯೊಬ್ಬರು ಹೇಳಿದರು.
ಸಾಂದರ್ಭಿಕ ರಜೆ: ಎಲ್ಲ ನೌಕರರು ಸಾಂದರ್ಭಿಕ ರಜೆ ಹಾಕಿ ಬಂದ್ಗೆ ಬೆಂಬಲ ನೀಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಸದಸ್ಯರಿಗೆ ಕರೆ ನೀಡಿತ್ತು.
ಈ ಹಿಂದೆ ಬಂದ್ ನಡೆದಾಗ ನೌಕರರು ರಜೆ ಹಾಕದೇ ಪಾಲ್ಗೊಂಡಿದ್ದರಿಂದ, ಅವರ ಒಂದು ದಿನದ ವೇತನಕ್ಕೆ ಕತ್ತರಿ ಹಾಕಲಾಗಿತ್ತು.