ಮೂಡಲಗಿ: ಮಹದಾಯಿ ನೀರು ಹಂಚಿಕೆ ವಿಷಯದಲ್ಲಿ ಕನ್ನಡ ಸಂಘಗಳ ಒಕ್ಕೂಟವು ಕರೆ ಕೊಟ್ಟ ಕರ್ನಾಟಕ ಬಂದ್ಗೆ ಇಲ್ಲಿಯ ಕರ್ನಾಟಕ ನವ ನಿರ್ಮಾಣ ಸೇನೆಯ ಪದಾಧಿಕಾರಿಗಳು ಸಮೀಪದ ಗುರ್ಲಾಪುರ ಕ್ರಾಸ್ದಲ್ಲಿ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಹಾಕಿ ಪ್ರತಿಭಟನೆ ಮಾಡಿದರು.
ಸೇನೆಯ ತಾಲ್ಲೂಕು ಅಧ್ಯಕ್ಷ ಹಣಮಂತ ಗುಡ್ಲಮನಿ ‘ಮಹಾದಾಯಿ ನೀರು ನಮ್ಮ ಹಕ್ಕು ಆಗಿದ್ದು, ನಮ್ಮ ನೀರನ್ನು ನಾವು ಕೇಳುತ್ತಿದ್ದೇವೆ. ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ರಾಜಕಾರಣಿಗಳು ನಿರ್ಧಾರಗಳು ಮತಗಳ ಗಿಟ್ಟಿಸಿಕೊಳ್ಳುವದೇ ಆಗಿರುತ್ತದೆ. ಜನಪರ ನಿರ್ಧಾರಗಳು ಆಗಿರುವದಿಲ್ಲ ಎಂದು ಟೀಕಿಸಿದರು.
2 ಗಂಟೆಯಷ್ಟು ರಾಜ್ಯ ಹೆದ್ದಾರಿ ತಡೆವೊಡ್ಡಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ತೀವ್ರ ಭಗೆಹರಿಸಬೇಕು ಎಂದು ಒತ್ತಾಯಿಸಿದರು.
ಮೂಡಲಗಿಯಲ್ಲಿ ಕರ್ನಾಟಕ ಬಂದ್ ಬಿಸಿ ತಟ್ಟಲಿಲ್ಲ. ವಾಹನ ಸಂಚಾರ ಯಥಸ್ಥಿತಿ ಇತ್ತು. ಅಂಗಡಿ, ಮುಂಗಟ್ಟುಗಳು ತೆರೆದಿದ್ದವು. ಶಾಲೆ, ಕಾಲೇಜುಗಳು ಪ್ರಾರಂಭವಾಗಿದ್ದರೂ ಸಹ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿತ್ತು. ಶೇ. 30ರಷ್ಟು ಮಾತ್ರ ಹಾಜರಾತಿ ಇರುವ ಬಗ್ಗೆ ಕಾಲೇಜು ಪ್ರಾಚಾರ್ಯರು ತಿಳಿಸಿದರು.