ಕೋಲ್ಕತ್ತ: ‘ಕೇಂದ್ರ ಸರ್ಕಾರದ ಪರಿಸರ ನೀತಿಗಳು ಕೈಗಾರಿಕೋದ್ಯಮಿಗಳ ಪರವಾಗಿವೆ. ಪರಿಸರ ಕಾನೂನುಗಳನ್ನು ದುರ್ಬಲಗೊಳಿಸಲಾಗುತ್ತಿದೆ’ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಆರೋಪಿಸಿದರು.
‘ಪರಿಸರ ಸಂರಕ್ಷಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುತ್ತಾರೆಯೇ ಹೊರತು ಆಚರಣೆಯಲ್ಲಿ ಪಾಲಿಸುವುದಿಲ್ಲ’ ಎಂದು ಶನಿವಾರ ಇಲ್ಲಿ ತಿಳಿಸಿದರು.
‘ಪರಿಸರ ಇಲಾಖೆ ಕೇವಲ ರಬ್ಬರ್ ಸ್ಟ್ಯಾಂಪ್ ಆಗಿ ಉಳಿದಿದೆ. ವಾಣಿಜ್ಯ ವ್ಯವಹಾರವನ್ನು ಸುಲಭಗೊಳಿಸುವ ಹೆಸರಿನಲ್ಲಿ ಕೈಗಾರಿಕೆಗಳ ಪರವಾಗಿ ಪರಿಸರ ನೀತಿ ರೂಪಿಸಲಾಗುತ್ತಿದೆ’ ಎಂದು ಅವರು ಹರಿಹಾಯ್ದರು.
‘ಪರಿಸರ ಸಂರಕ್ಷಣೆ ವಿಷಯವಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ನುಡಿದಂತೆ ನಡೆದರು. ತಮ್ಮ ನಿತ್ಯದ ಆಡಳಿತದಲ್ಲಿಯೂ ಈ ನೀತಿ ಅಳವಡಿಸಿಕೊಂಡಿದ್ದರು. ಆದರೆ, ಪ್ರಸ್ತುತ ಪ್ರಧಾನಿ ಅವರು ಹೇಳಿದಂತೆ ನಡೆಯುತ್ತಿಲ್ಲ’ ಎಂದು ಜೈರಾಂ ರಮೇಶ್ ಕಿಡಿ ಕಾರಿದರು.