ಮುಂಬೈ: ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ‘ಪದ್ಮಾವತ್’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಹಣ ಗಳಿಸುತ್ತಿದೆ.
ಮೂರು ದಿನಗಳಲ್ಲಿ ಚಿತ್ರ ₹56 ಕೋಟಿ ಗಳಿಸಿದೆ. ವಾರದ ಅವಧಿಯಲ್ಲಿ ಈ ಮೊತ್ತ ₹100 ಕೋಟಿ ದಾಟುವ ನಿರೀಕ್ಷೆ ಇದೆ.
‘ಕರ್ಣಿ ಸೇನಾ ಪಾತ್ರ ಇಲ್ಲ’: ‘ಪದ್ಮಾವತ್’ ಚಿತ್ರ ಬಿಡುಗಡೆ ವಿರೋಧಿಸಿ ನಡೆದಿರುವ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕರ್ಣಿ ಸೇನಾದ ಪಾತ್ರ ಇಲ್ಲ ಎಂದು ಅದರ ಮುಖ್ಯಸ್ಥ ಲೋಕೇಂದ್ರ ಸಿಂಗ್ ಕಾಲವಿ ಶನಿವಾರ ನವದೆಹಲಿಯಲ್ಲಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ರಾಜ್ಯಗಳಲ್ಲಿ ನಡೆದಿರುವ ಹಿಂಸಾಚಾರ ಮುಂದಿಟ್ಟುಕೊಂಡು ಸಂಘಟನೆ ವಿರುದ್ಧ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಹಿಂಸಾಚಾರ ಪ್ರಕರಣಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ಅವರು, ಚಿತ್ರದ ವಿರುದ್ಧ ‘ಜನರ ಕರ್ಫ್ಯೂ’ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಇಬ್ಬರ ಬಂಧನ– ವಡೋದರಾ(ಪಿಟಿಐ): ‘ನಾನೊಬ್ಬ ರಜಪೂತನಾಗಿದ್ದರೂ, ಪದ್ಮಾವತ್ ಚಲನಚಿತ್ರ ನೋಡುತ್ತೇನೆ’ ಎಂದು ಮೊಬೈಲ್ನಲ್ಲಿ ಹೇಳುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆಗೈದ ಇಬ್ಬರನ್ನು ಅಂಕಲೇಶ್ವರ ಪೊಲೀಸರು ಶನಿವಾರ ಬಂಧಿಸಿದ್ದಾರೆ.