ಗುಡಿಬಂಡೆ: ಪಟ್ಟಣದಲ್ಲಿ ಶನಿವಾರದಿಂದ ಆರಂಭವಾದ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಡಿಂಡಿಮ ಮೊಳಗಿತು. ತೆಲುಗು ಭಾಷೆ ಪ್ರಾಬಲ್ಯದ ತಾಲ್ಲೂಕಿನಲ್ಲಿ ಕನ್ನಡದ ಕಂಪು ಪಸರಿಸಿತು. ಜನಪದ ಕಲಾವಿದರ ಜತೆ ಸಾಹಿತ್ಯ ಪರಿಷತ್ ಸದಸ್ಯರು ಕುಣಿದು ಕುಪ್ಪಳಿಸಿ ಸಂತಸಪಟ್ಟರು.
ಪಟ್ಟಣದ ತುಂಬೆಲ್ಲ ಗಣ್ಯರಿಗೆ ಸ್ವಾಗತ ಕೋರುವ ಬ್ಯಾನರ್ಗಳು ಹಾಗೂ ಕನ್ನಡ ಬಾವುಟಗಳನ್ನು ಎಲ್ಲೆಡೆ ಕಟ್ಟಲಾಗಿತ್ತು. ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಮ್ಮೇಳನಾಧ್ಯಕ್ಷೆ ಆರ್.ಕೆ.ಸರೋಜಾ ಲಕ್ಷ್ಮಿಪತಿ ಬಾಬು ಅವರನ್ನು ಪಲ್ಲಕ್ಕಿ ಮೆರವಣಿಗೆಯಲ್ಲಿ ಕರೆತರಲಾಯಿತು. ಎಸ್ಪಿ ಕಾರ್ತಿಕ್ ರೆಡ್ಡಿ ಮೆರವಣಿಗೆಗೆ ಚಾಲನೆ ನೀಡಿದರು.
ಡೊಳ್ಳುಕುಣಿತ, ಪೂಜಾಕುಣಿತ, ಗೊರವಯ್ಯ ಕುಣಿತ, ಲಂಬಾಣಿ ನೃತ್ಯ, ಗಾರುಡಿ ಗೊಂಬೆ, ಮಹಿಳಾ ವೀರಗಾಸೆ ಸೇರಿದಂತೆ ವಿವಿಧ ಜನಪದ ಕಲಾವಿದರು ಮೆರವಣಿಗೆಗೆ ರಂಗು ತುಂಬಿದರು. ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಕಲಾವಿದರ ಜತೆ ಹೆಜ್ಜೆ ಹಾಕಿದರು.