ಕಲಬುರ್ಗಿ: ಮಾಜಿ ಸಚಿವ ಬಾಬುರಾವ್ ಚವಾಣ ಅವರಿಗೆ ಸೇರಿದ ಇಲ್ಲಿನ ವೆಂಕಟೇಶ್ವರ ನಗರದ ನಿರ್ಮಾಣ ಹಂತದ ಮನೆಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಂಚೋಳಿ ತಾಲ್ಲೂಕು ಬುಯ್ಯಾರ್ ತಾಂಡಾ ನಿವಾಸಿ ಗೋಪಾಲ ರಾಠೋಡ (೪೩) ಮೃತಪಟ್ಟವರು.
ಇವರು ಬಾಬುರಾವ್ ಚವಾಣ ಅವರ ಬಂಜಾರ ಶಿಕ್ಷಣ ಸಂಸ್ಥೆಯಲ್ಲಿ ಜವಾನನಾಗಿ ಕೆಲಸ ಮಾಡುತ್ತಿದ್ದರು. ಹಲವು ತಿಂಗಳುಗಳಿಂದ ನಿರ್ಮಾಣ ಹಂತದ ಮನೆಯ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ ರಾತ್ರಿ ಕುಡಿದ ಅಮಲಿನಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
'ಹೊಟ್ಟೆ ನೋವು ತಾಳಲಾರದೆ ಗೋಪಾಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಸಂಬಂಧಿಕರು ದೂರು ನೀಡಿದ್ದಾರೆ' ಎಂದು ಮೂಲಗಳು ತಿಳಿಸಿವೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.