ಸಂತ್ಯಾಗ್ ಎದುರಿಗೆ ಸಿಕ್ಕ ಪ್ರಭ್ಯಾ, ಭಾಳ್ ಅವಸರದಾಗ್ ಇದ್ಹಾಂಗ್ ಕಾಣಾಕತ್ತಿದ್ದ. ಭುಜ ಹಿಡಿದು ನಿಲ್ಲಿಸಿ ಮಾತಿಗೆ ಎಳದ್ರೂ, ಕೊಸರಿಕೊಂಡು ಓಡಿ ಹೋಗುಹಂಗ ಕಂಡ.
‘ಏಯ್ ಯಾಕೊ, ಹಿಂಗ್ಯಾಕ್ ದೇವ್ರು ಮೈಮ್ಯಾಲ್ ಬಂದವರಂಗ್ ಓಡಾಕತ್ತಿ, ನಿಂದ್ರೊ’ ಎಂದೆ.
‘ಏಯ್ ಪರಿವರ್ತನಾ ಯಾತ್ರೆಗೆ ಹೋಗುದೈತಿ. ಅಲ್ಲಿ ಆರ್ಕೆಸ್ಟ್ರಾ, ಎಕ್ಸ್ಟ್ರಾ ನಟಿಯರ ಕುಣಿತ ನೋಡುದೈತಿ... ಸರಿ’ ಎಂದು ತಲೆ ಅಲ್ಲಾಡಿಸಿ, ‘ನಿಂಜೊತೆ ಮಾತಾಡಾಕ್ ಪುರುಸೊತ್ತಿಲ್ಲ’ ಎಂದ.
‘ನಿನ್ನಪ್ಪನ, ಏನ್ ಭಾರಿ ಘನಂದಾರಿ ಕೆಲ್ಸಕ್ ಹೊಂಟಿ ನೋಡ್’ ಎಂದು ಲೇವಡಿ ಮಾಡಿದೆ.
‘ಮಾತನ್ಯಾಗ್, ಅಪ್ಪನ್ನ ಸುತರಾಂ ಎಳೆದು ತರಬ್ಯಾಡ ನೋಡ್’ ಅಂದ ಎಚ್ಚರಿಕೆ ಧಾಟಿವೊಳ್ಗ.
‘ಅಲ್ಲೋ, ನಮ್ಮ ಸಿಎಮ್ಮು, ಅವರಪ್ಪನಾಣೆಗೂ ಯಡ್ಯೂರಪ್ಪ, ಕುಮಾರಣ್ಣ ಸಿಎಂ ಆಗೋದಿಲ್ಲ ಅಂತ ಹೋದಲ್ಲಿ, ಬಂದಲ್ಲಿ ಹೇಳ್ಕೊಂಡ್ ತಿರ್ಗಾಕತ್ತಾರs, ನೀ ನೋಡಿದ್ರ ಅಪ್ಪನಾಣೆ ಮಾಡ್ಬೇಡ ನೋಡ್ ಅಂತ ಹೆದರ್ಸಾಕತ್ತಿ’ ಎಂದೆ.
‘ಅದ್ನಪ ನಾನೂ ಹೇಳೋದು. ‘ನಮ್ಮಪ್ಪ ಇವರಿಗೆ ಬಿಟ್ಟಿ ಸಿಕ್ಕಾನೇನ್. ಸಿಎಂ ಬೇಕಿದ್ರ ಅವರಪ್ಪನ ಮೇಲೆ ಆಣೆ ಮಾಡಲಿ’ ಎಂದು ಕುಮಾರಣ್ಣ ತಿರುಗೇಟ್ ಕೊಟ್ಟಾನಲ್ಲ’ ಎಂದು ದಬಾಯಿಸಿದ.
‘ಒಂದ್ ಮಾತಪಾ. ಇಷ್ಟಕ್ಕೂ ಈ ಯಡ್ಯೂರಪ್ಪ, ಕುಮಾರಣ್ಣ ತಮ್ಮ ಅಪ್ಪನಾಣೆಗೂ ಇಲ್ಲವೇ ಸಿದ್ರಾಮಣ್ಣನ ಅಪ್ಪನಾಣೆಗೂ ನಾವೇ ಈ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗೋದು ಅಂತ ಯಾಕ್ ಹೇಳ್ಕೊಂಡ್ ತಿರ್ಗಾಕತ್ತಿಲ್ಲಪ್ಪ’ ಎಂದೆ. ನನ್ನ ಮಾತಿಗೆ ಏನು ಉತ್ತರ ಕೊಡಬೇಕೊ ಎನ್ನುವುದು ತೋಚದೆ ಪ್ರಭ್ಯಾ ಮಂಕಾದ.
ಅವನ ಪೇಲವ ಮುಖಾ ನೋಡಾಕ್ ಆಗ್ದ, ಭುಜಕ್ಕ ಕೈಹಾಕಿ, ಎದುರಿಗಿನ ಚಾದಂಗಡಿಗೆ ಎಳೆದುಕೊಂಡು ಹೋದೆ. ‘ಏಯ್ ಪಕ್ಯಾ, ಎರ್ಡ್ ಹಾಪ್’ ಎಂದು ಆರ್ಡರ್ ಮಾಡಿದೆ.
‘ಎರ್ಡ್ ಹಾಪಾ’ ಎಂದು ಪಕ್ಯಾ ನಮ್ಮನ್ನೇ ನೋಡುತ್ತ ಕಿಚಾಯಿಸಿದ. ‘ಹ್ಞೂನಪಾ, ಎರ್ಡ್ ಹಾಪs. ನಾವು ಹಾಪ್. ನೀನು ಫುಲ್ ಬಿಡು. ನಸೀಬಿದ್ರ ನೀನೂ ಮುಂದ ಪ್ರಧಾನಿ ಆಗ್ತಿ’. ನನ್ನ ಮಾತ್ ಕಿವಿಮ್ಯಾಲ್ ಹಾಕ್ಕೊಳ್ದ, ‘ಬಿಸಿ ಬಿಸಿ ಸಮೋಸಾ ಅದಾವ್ ತಿಂತಿರೇನ್’ ಎಂದು ಪಕ್ಯಾ ಕೇಳಿದ.
‘ಹ್ಞೂ, ಅದೂ ಎರ್ಡ್ ಕೊಡು. ಲಾಲೂ ಹೆಸರ್ನ್ಯಾಗ್ ತಿಂದ್ ತೇಗಿದರಾತು’.
‘ಹ್ಞಾ, ಲಾಲೂsss ಎಂದು ಪಕ್ಯಾ ಪೆಕರ್ನ್ಹಂಗ್ ರಾಗ ಎಳೆದ.
‘ಅದು ಭಾಳ್ ಹಿಂದಿನ ಮಾತ್ ಬಿಡು. ‘ಜಬ್ತಕ್ ಸಮೋಸೆಮೆ ಆಲೂ ರಹೆಗಾ, ತಬ್ತಕ್ ಬಿಹಾರ್ಮೆ ಲಾಲೂ ರಹೇಗಾ...’ ಎಂದು ಲಾಲು ಪ್ರಸಾದ್ ಸಾಹೇಬ್ರು ಹ್ಞೂಂಕರಿಸಿದ್ದರು. ಈಗ ನೋಡಿದ್ರ ‘ಜಬ್ ತಕ್ ಬಿಹಾರ್ಮೆ ಲಾಲೂ ರಹೇಗಾ, ತಬ್ ತಕ್ ಓ ಜೈಲ್ಮೇಹಿ ರಹೇಗಾ’ ಆಗೇದ್ ನೋಡ್’. ಅದೇ ಭರಾಟೆವೊಳ್ಗ ‘ಸಮೋಸಾ ತಿನ್ನಾಕ್ ಚಮ್ಚಾ ಕೊಡು’ ಎಂದೆ.
‘ಹೋಗ ನಿನ್ನಪ್ಪನs. ನಿನ್ನ ತಲಿಗಿಲಿ ಕೆಟ್ಟದೇನ. ಸಮೋಸಾ ತಿನ್ನಾಕ್ ಚಮ್ಚಾ ಬೇಕೆನೋ. ನಮ್ಮ ಕಾಂಗ್ರೆಸ್ ಕ್ಯಾಂಟೀನ್ದಾಗ್ ಇರೋದs ಎರ್ಡ್ ಚಮ್ಚಾ. ಅವು ಯಾವಾಗ್ ಮುನ್ಸಿಕೊಳ್ತಾವೊ, ಯಾವಾಗ್ ಒಂದಾಗ್ತಾವೊ ಒಂದೂ ಗೊತ್ತಾಗುದಿಲ್ಲ. ಈ ಚಮ್ಚಾಗಳೆರಡು ತಮ್ಮೊಳಗ ಹೀಂಗs ಜಗಳಾ ಆಡ್ತಿದ್ರ ಇಬ್ರೂ ಸಿಎಂ, ಡಿಸಿಎಂ ಹುದ್ದೆ ಮರ್ತ್ ಇಂದಿರಾ ಕ್ಯಾಂಟೀನ್ಯಾಗ್s ಸರ್ವರ್ ಸಿದ್ದಣ್ಣ ಇಲ್ಲಾ ಅಡಿಗಿ ಪರಂ ಭಟ್ರ ಆಗಿ ಕಾಯಂ ಆಗಿ ಕೆಲ್ಸ ಮಾಡಬೇಕಾಗ್ತದ ನೋಡ್’ ಎಂದ. ‘ಲೇ ಪಕ್ಯಾ ನಿನ್ನ ರಾಜಕೀಯ ಜ್ಞಾನ ಭಾರಿ ಐತಿ ಬಿಡಪ’ ಎಂದು ಷಹಬ್ಬಾಸಗಿರಿ ಕೊಟ್ಟೆ.
‘ನನಗ್ಯಾವ ಷಹಬ್ಬಾಸಗಿರಿ ಬ್ಯಾಡೊ ಮಾರಾಯ. ಬಿಸಿ ಬಿಸಿ ಭಜಿ ತಿನ್ನುದಿದ್ರ ಈಗ್ಲೆ ಹೇಳ್ರಿ. ನಾಳೆ ನಮ್ಮ ಚಾದಂಗಡಿ ಬಂದ್ ಇರ್ತದ. ವಾಚಾಳ್ ನೊಗ್ರಾಜ್ ನಾಳೆ ಮತ್ ಬಂದ್ಗೆ ಕರೆ ಕೊಟ್ಟಾನ್ ನೋಡ್’ ಅಂದ.
‘ಲೇ ಕನ್ನಡದ ಕಟ್ಟಾಳುಗಳಿಗೆ, ‘ಬಂದ್’ಕಾರಣಿಗಳಿಗೆ ಹೀಂಗೆಲ್ಲ ಹೊಸ ಹೆಸರ್ ಇಟ್ರ ಅವ್ರು ಅದ್ನೂ ಪ್ರತಿಭಟಿಸಿ ಇನ್ನೊಂದ್ ಬಂದ್ಗೂ ಕರೆ ಕೊಟ್ಟಾರ್ಲೆ. ಕನ್ನಡದ ಧೀಮಂತರ ಹೆಸರ್ನ ಸರಿಯಾಗಿ ಹೇಳಲೂ ಬಾರದ ಕನ್ನಡಿಗರಿಗೆ ಧಿಕ್ಕಾರ ಕೂಗುತ್ತಲೇ ವಾಚಾಮಗೋಚರ ಬೈದಾರ್ ಹುಷಾರ್’ ಎಂದೆ.
‘ಏಯ್ ನಾಳೆ ಹೆಂಗೂ ಸಿಂಹ ಬರಾಕತ್ತದ. ಯಾರ್ ಕೈಮೇಲಾಗ್ತದ ನೋಡಿದ್ರಾತು ಬಿಡು’ ಎಂದು ಪ್ರಭ್ಯಾ ನಡು ಬಾಯಿ ಹಾಕಿದ.
‘ಯಾವ್ ಸಿಂಹಾನೊ. ಕಾಡಿಂದೊ, ನಾಡಿಂದೊ ಅಥ್ವಾ ಗ್ರಾಮ ಸಿಂಹಾನೋ?’ ಎಂದು ಪ್ರಶ್ನೆ ಎಸೆದೆ.
‘ಏಯ್, ಅದೆಲ್ಲ ಸೂಕ್ಷ್ಮ ನಂಗ ಗೊತ್ತಿಲ್ಲಪ್ಪೊ. ಮೊನ್ನೆ ಮೈಸೂರಿಗೆ ಹುಲಿ ಬಂದಿತಂತ್, ಈಗ ಬೆಂಗ್ಳೂರಿಗೆ ಸಿಂಹ ಬರ್ತದಂತ’ ಅಂದ ಪಕ್ಯಾ.
‘ಏನ್ ಕರ್ನಾಟಕ ಅಂದ್ರ ಕಾಡ್, ಇಲ್ಲಿನವ್ರು ಕಾಡ್ ಮನುಷ್ಯಾರು ಅಂತ ತಿಳಕೊಂಡಾರೇನ್ ಇವ್ರು. ಹುಲಿ, ಸಿಂಹ ಸಭೆ ನಡೆಸಿದ್ರ, ಕರಡಿ, ಕಾಡುಕೋಣ, ನರಿ, ಚಿರತೆ, ತೋಳಗಳ ಜತೆ ನಾಡಿನ ಕೆಲ ದನಗಳೂ ಸೇರಬಹುದೇನೊ’ ಎಂದು ಪಕ್ಯಾ ತನ್ನ ಶಾಣ್ಯಾತನ ಪ್ರದರ್ಶಿಸಿದ.
‘ಅಲ್ಲಪಾ ಹುಲಿ– ಸಿಂಹಗಳ ಪಾರ್ಟಿ ಅಧಿಕಾರಕ್ಕ ಬಂದ್ರ ಕಾಡು ಪ್ರಾಣಿಗಳ ಆಳ್ವಿಕೆ ನೋಡಬೇಕಾಗ್ತೈದಲ್ಲೋ. ಕರುನಾಡಿನವರು ಏನ್ ಕರ್ಮ ಮಾಡ್ಯಾರಪ. ಅದು ಹೋಗ್ಲಿ ಬಿಡು. ಸರ್ಕಾರ ಚಮ್ಚಾಗಳದ್ದು ಇರ್ಲಿ ಅಥ್ವಾ ಕಾಡು ಪ್ರಾಣಿಗಳದ್ದು ಬರ್ಲಿ. ಕನ್ನಡಿಗರ ನಸೀಬ್ದಾಗ್ ಇದ್ಹಂಗ್ ಆಗ್ತೈತಿ. ನನಗ್ ಒಂದ್ ಪ್ರಶ್ನೆ ಕಾಡಾಕತ್ತೈತಿ. ಹೊಸ ಸಿಎಂ ಪ್ರಾಣಿ ಯಾವುದಪ್ಪಾ. ತನಗಿಂತ ಕಿರಿಯ ವಯಸ್ಸಿನ ಹುಲಿಯ ಕಾಲಿಗೆ ಬಹಿರಂಗ ಸಭೆಯೊಳ್ಗ ದೀಡ್ ನಮಸ್ಕಾರ ಹಾಕಿದ ವಯೋವೃದ್ಧ ಪ್ರಾಣಿಗೆ ಕಾಡಿನ ರಾಜ ಸಿಂಹ, ನಾಳಿನ ಸಭೆಯೊಳ್ಗ ಹೊಸ ಹೆಸರು ಇಡಬಹು
ದೇನೋ. ಆ ಪ್ರಾಣಿ ಯಾವುದು ಅಂತ ನಾಳೆ ಗೊತ್ತಾಗ್ತದ ಬಿಡು’ ಎಂದೆ.
ನನ್ನ ಮಾತ್ ಕೇಳಿ ಪಕ್ಯಾ ಬಿದ್ ಬಿದ್ ನಗಾಕತ್ತ. ನನಗೂ ನಗು ತಡೆಯಲಾರದೆ ಕೆಮ್ಮು ಹತ್ತಿ ನೀರು ಕುಡಿಯತೊಡಗಿದೆ. ನಮ್ಮಿಬ್ಬರ ನಗು ಕಂಡು ದುರ್ದಾನ ತೆಗೆದುಕೊಂಡಂತೆ ಪ್ರಭ್ಯಾ ಸಿಟ್ಟಿನಿಂದಲೇ ಚಾದ ಕಪ್ ಕುಕ್ಕಿ ಹೊರನಡೆದ.
‘ಏಯ್, ಹೆಂಗ್ ಓಡಿ ಹೊಂಟಾನ ನೋಡ್. ಬಿಲ್ ಕೊಟ್ಟು ಹೋಗು ಅಂತ ಹೇಳು ಅಂವ್ಗ’ ಎಂದು ಹೇಳುತ್ತಲೇ ಪಕ್ಯಾ ಮತ್ ನಗಾಡಿದ.
‘ಹೋಗ್ಲಿ ಬಿಡೊ ಮಾರಾಯ. ಅವ್ನ ಮ್ಯಾಲೆ ದೊಡ್ಡ ಜವಾಬ್ದಾರಿ ಅದ. ನಾಳಿನ ಸಿಂಹದ ಸಮಾವೇಶಕ್ ಪೊದೆ, ಮರದ ಪೊಟರೆ, ಬಿಲ, ಗುಹೆಗಳಲ್ಲಿ ಅಡಗಿರುವ ಇಲಿ, ಚಿರತೆ, ಕರಡಿ, ನರಿ, ತೋಳಗಳನ್ನೆಲ್ಲ ಒಟ್ಗೂಡಿಸಬೇಕಾಗೇದ. ಇಲ್ಲಂದ್ರ ಪರಿವರ್ತನಾ ಸಮಾವೇಶದ ಉದ್ಘಾಟನೆಯಲ್ಲಿ ಹುಲಿಗೆ ಆದ ಅವಮಾನ, ಸಿಂಹಕ್ಕೂ ಆಗುವ ಛಾನ್ಸ್ ಭಾಳ್ ಅದ ಬಿಡು’ ಎಂದು ಹೇಳುತ್ತ ನಾನೂ ಚಾದಂಗಡಿಯಿಂದ ಹೊರನಡೆದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.