ಧಾರವಾಡ: ತಾಲ್ಲೂಕಿನ ಹೊನ್ನಾಪುರ ನಿವಾಸಿ, ವಕೀಲ ಬಿ.ಐ.ದೊಡ್ಡಮನಿ ಅವರ ಮೇಲೆ ಅಪರಿಚಿತರು ಸೋಮವಾರ ಹಾಡಹಗಲೇ ಮಚ್ಚು, ಲಾಂಗ್ಗಳಿಂದ ಹಲ್ಲೆ ನಡೆಸಿದ್ದಾರೆ.
ತೀವ್ರವಾಗಿ ಗಾಯಗೊಂಡಿರುವ ದೊಡ್ಡಮನಿಯವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಟ್ಟಾಡಿಸಿ ಹಲ್ಲೆ ಮಾಡುತ್ತಿರುವುದನ್ನು ನೋಡಿ ಬೆಚ್ಚಿದ ಜನರು ದಿಕ್ಕಾಪಾಲಾಗಿ ಓಡಿದರು.
ತಹಶೀಲ್ದಾರ್ ಕಚೇರಿ ಸಮೀಪವೇ ಈ ಘಟನೆ ನಡೆದಿದ್ದು, ನಿಖರವಾದ ಕಾರಣ ಗೊತ್ತಾಗಿಲ್ಲ. ದೊಡ್ಡಮನಿ ಸಮೀಪದಲ್ಲಿರುವ ಗ್ರಾಮೀಣ ಪೊಲೀಸ್ ಠಾಣೆಗೆ ಓಡಿ ಹೋಗಿ ರಕ್ಷಣೆ ಪಡೆದರು.
ವಕೀಲರ ಹೆಸರು ರೌಡಿಪಟ್ಟಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಹಲ್ಲೆ ನಡೆಸಿದ ದೃಶ್ಯಗಳು ಸೆರೆಯಾಗಿವೆ.