ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 53ನೇ ಘಟಿಕೋತ್ಸವದಲ್ಲಿ 55,780 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ.
ಹಂಗಾಮಿ ಕುಲಪತಿ ವಿ. ಸುದೇಶ್ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಗುರುವಾರ ಬೆಳಿಗ್ಗೆ 10.30ಕ್ಕೆ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಘಟಿಕೋತ್ಸವ ನಡೆಯಲಿದೆ. ಹಿರಿಯ ಬಾಹ್ಯಾಕಾಶ ವಿಜ್ಞಾನಿ ಎ.ಎಸ್. ಕಿರಣ್ ಕುಮಾರ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ’ ಎಂದರು.
23,846 ಮಂದಿ ಉನ್ನತ ಶ್ರೇಣಿ, 19,704 ಮಂದಿ ಪ್ರಥಮದರ್ಜೆ, 6,168 ಮಂದಿ ದ್ವಿತೀಯದರ್ಜೆ, 5,904 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 158 ವಿದ್ಯಾರ್ಥಿಗಳು ಪಿಎಚ್.ಡಿ ಪದವಿ ಪಡೆಯಲಿದ್ದಾರೆ ಎಂದು ಅವರು ವಿವರಿಸಿದರು.
‘ಕಳೆದ ವರ್ಷಕ್ಕೆ ಹೋಲಿಸಿದರೆ ಉನ್ನತ ಶ್ರೇಣಿಯನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. 2016ರಲ್ಲಿ 5,104 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ರ್ಯಾಂಕ್ ಪಡೆದ 79 ವಿದ್ಯಾರ್ಥಿಗಳಿಗೆ ಪದಕ ನೀಡಲು ₹4.8 ಲಕ್ಷ, ನಗದು ಬಹುಮಾನಕ್ಕೆ 2 ಲಕ್ಷವನ್ನು ವಿಶ್ವವಿದ್ಯಾಲಯದಿಂದ ಭರಿಸಲಾಗಿದೆ’ ಎಂದರು.
ವಿದ್ಯಾರ್ಥಿನಿಯರೇ ಮೇಲುಗೈ: ಚಿನ್ನದ ಪದಕ ಪಡೆದವರಲ್ಲಿ ಈ ಬಾರಿಯೂ ವಿದ್ಯಾರ್ಥಿನಿಯರದ್ದೇ ಮೇಲುಗೈ. ಪದವಿಯಲ್ಲಿ 10 ಹಾಗೂ ಸ್ನಾತಕೋತ್ತರ ಪದವಿಯಲ್ಲಿ 38 ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ ಲಭಿಸಿದೆ. ವಿ.ವಿ.ಎಸ್ ಪ್ರಥಮದರ್ಜೆ ಮಹಿಳಾ ಕಾಲೇಜಿನ ಸಾಯಿ ಜ್ಯೋತಿ ಸನ್ಮತಿ (ಬಿ.ಕಾಂ.) ಅವರಿಗೆ ಒಟ್ಟು 9 ನಗದು ಬಹುಮಾನ ದೊರೆತಿದೆ.
‘ಗುರಿ ಇದ್ದರೆ ಯಶಸ್ಸು ಖಂಡಿತ’
‘ಪದವಿಯಲ್ಲಿದ್ದಾಗಲೇ ಮದುವೆಯಾಯಿತು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮನೆ ಇದ್ದು, ಹೆಬ್ಬಾಳದಲ್ಲಿ ಕಾಲೇಜು ಇತ್ತು. ಪ್ರತಿದಿನ ಪ್ರಯಾಣದಲ್ಲೇ ಸಾಕಷ್ಟು ಸಮಯ ಕಳೆಯುತ್ತಿದ್ದೆ. ಮನೆಯನ್ನೂ ನಿಭಾಯಿಸಿಕೊಂಡು, ಓದುವುದು ಕಷ್ಟವೇ ಆಗಿತ್ತು. ಆದರೆ, ಓದಬೇಕೆಂಬ ಅದಮ್ಯ ಆಸೆ, ಇವೆಲ್ಲವನ್ನೂ ಮೀರಿ ಬೆಳೆಯುವಂತೆ ಮಾಡಿತು’ ಎಂದು ಮೂರು ಚಿನ್ನದ ಪದಕಗಳನ್ನು ಪಡೆದ ಪ್ರೆಸಿಡೆನ್ಸಿ ಕಾಲೇಜಿನ ಎಂ.ಕಾಂ ವಿದ್ಯಾರ್ಥಿನಿ ಭಾಗ್ಯಲಕ್ಷ್ಮಿ ತಮ್ಮ ಸಾಧನೆಯ ಹಾದಿಯ ಬಗ್ಗೆ ಹೇಳಿಕೊಂಡರು.
ಪ್ರಯೋಗಾಲಯದ ಮೂಲಸೌಕರ್ಯ ಹೆಚ್ಚಿಸಲಿ
‘ವಿಜ್ಞಾನದ ವಿದ್ಯಾರ್ಥಿಗಳಿಗೆ ಪ್ರಯೋಗಾಲಯ ಹೃದಯವಿದ್ದಂತೆ. ತರಗತಿಯಲ್ಲಿ ಎಷ್ಟೇ ಕಲಿತರೂ
ಪ್ರಯೋಗಾಲಯದಲ್ಲಿ ಅದನ್ನು ಪರೀಕ್ಷಿಸಲಿಲ್ಲ ಎಂದರೆ ಪ್ರಯೋಜನಕ್ಕೆ ಬಾರದು. ನಮ್ಮ ವಿಭಾಗದ ಪ್ರಯೋಗಾಲಯದಲ್ಲಿ ಅಗತ್ಯವಾದ ಉಪಕರಣಗಳೇ ಇಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಪಾಲ್ಗೊಳ್ಳಲು ಇನ್ನೂ ಹೆಚ್ಚಿನ ಮೌಲಸೌಕರ್ಯ ಓದಗಿಸುವುದು ಅಗತ್ಯ. ಪ್ರಯೋಗಾಲಯವನ್ನು ಉನ್ನತೀಕರಿಸಿದರೆ ಮುಂದಿನ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ’ ಎಂಬುದು ಬೆಂಗಳೂರು ವಿ.ವಿಯ ಪ್ರಾಣಿವಿಜ್ಞಾನ ವಿಭಾಗದಲ್ಲಿ 3 ಚಿನ್ನದ ಪದಕಗಳನ್ನು ಗಳಿಸಿದ ಜಿ.ರೋಹಿಣಿ ಅವರ ಕೋರಿಕೆ.
112 -ಚಿನ್ನದ ಪದಕಗಳು
268 - ನಗದು ಬಹುಮಾನ
79 -ಪ್ರಥಮ ರ್ಯಾಂಕ್
31 -ಚಿನ್ನದ ಪದಕ ಪಡೆದ ಹುಡುಗರು
48 -ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯರು
ಚಿನ್ನದ ಪದಕ, ನಗದು ಬಹುಮಾನ ಪಡೆದ ವಿದ್ಯಾರ್ಥಿಗಳು
ಹೆಸರು, ವಿಭಾಗ , ಚಿನ್ನದ ಪದಕ, ನಗದು ಬಹುಮಾನ
ನಿಜ್ಜಿ ಸೂಸಾನ್, ಅನ್ವಯಿಕ ಭೂಗರ್ಭವಿಜ್ಞಾನ ವಿಭಾಗ (ಬೆಂಗಳೂರು ವಿ.ವಿ), 3, 2
ಜಿ. ರೋಹಿಣಿ, ಪ್ರಾಣಿವಿಜ್ಞಾನ ವಿಭಾಗ (ಬೆಂಗಳೂರು ವಿ.ವಿ), 3, 2
ಭಾಗ್ಯಲಕ್ಷ್ಮಿ , ಎಂ.ಕಾಂ (ಪ್ರೆಸಿಡೆನ್ಸಿ ಕಾಲೇಜು), 2, 1
ಪದವಿ
ಎನ್.ಎಲ್. ಧನುಷ್, ಬಿಸಿಎ (ಆಚಾರ್ಯ ಪದವಿ ಕಾಲೇಜು), 4, –
ಆಸ್ತಾ ಶ್ರೀವಾತ್ಸವ, ಬಿಬಿಎಂ (ಇಂಡಿಯನ್ ಅಕಾಡೆಮಿ ಕಾಲೇಜು), 4, 1
ಗುರುನಾಥ್ ಆರ್ ಕುಸಾಲಿ, ಮೆಕಾನಿಕಲ್ ಎಂಜಿನಿಯರ್ (ಯುವಿಸಿಇ), 3, 4
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.