ಹೂಗಳಿಂದ ತಯಾರಾಗಲಿದೆ ಆನೆ, ಹುಲಿ, ಚಿಟ್ಟೆ

ಉಡುಪಿ: ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಜಿಲ್ಲಾ ಕೃಷಿಕ ಸಮಾಜದ ಸಂಯುಕ್ತ ಆಶ್ರಯದಲ್ಲಿ ಇದೇ 10ರಿಂದ 12ವರೆಗೆ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಮತ್ತು ರೈತ ದಿನಾಚರಣೆ ಕಾರ್ಯಕ್ರಮ ರೈತ ಸೇವಾ ಕೇಂದ್ರದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವನಂದ ಕಪಾಶಿ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮವನ್ನು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ್ ಬಾಬು ಉಪಸ್ಥಿತರಿರುವರು ಎಂದರು.
ಫಲಪುಷ್ಟ ಪ್ರದರ್ಶನದ ಅಂಗವಾಗಿ 12ಅಡಿ ಶಿವನ ಮೂರ್ತಿಗೆ 3,100 ಕೆಂಪು, ಹಳದಿ, ಬಣ್ಣದ ಗುಲಾಬಿ ಹಾಗೂ 75ಕೆ.ಜಿ ಚೆಂಡು, ಸೇವಂತಿ ಬಳಸಿಕೊಂಡು ಪುಷ್ಪಲಂಕಾರ ಮಾಡಲಾಗುತ್ತದೆ. 5 ಅಡಿ ಎತ್ತರದ ನಂದಿ ಮೂರ್ತಿಗೆ 3,600 ಜರ್ಬೆರಾ ಹೂವುಗಳಿಂದ ಅಲಂಕಾರ ಮಾಡಲಾಗುವುದು. 4,000 ಕಾರ್ನೇಷನ್, ಲಿಲ್ಲಿ, 25ಕೆ.ಜಿ ಮೇರಿ ಗೋಲ್ಡ್ಗಳನ್ನು ಬಳಸಿಕೊಂಡು ಆನೆ, ಚಿಟ್ಟೆ ಹಾಗೂ ಹುಲಿಗಳ ಆಕೃತಿ ರಚನೆ ಮಾಡುವುದು.
ವಿವಿಧ ಜಾತಿಯ ಪಾಪಾಸು ಕಳ್ಳಿಗಳ ಅಲಂಕಾರಿಕ ಜೋಡಣೆ ಹಾಗೂ ವರ್ಟಿಕಲ್ ಗಾರ್ಡನ್, 16 ಜಾತಿ ವಾರ್ಷಿಕ ಹಾಗೂ ಬಹುವಾರ್ಷಿಕ ವಿವಿಧ ಅಲಂಕಾರಿಕ ಪುಷ್ಪಗಳ ಕುಂಡ ಪ್ರದರ್ಶನ ಸಹ ಇರಲಿದೆ. ಇಲಾಖೆ ದರದಲ್ಲಿ ಗಿಡಗಳ ಮಾರಾಟ, ಮಟ್ಟುಗುಳ್ಳ ಮತ್ತು ಮಲ್ಲಿಗೆ ಬೆಳೆ ವೀಕ್ಷಣೆ, ಘನ ದ್ರವ ತ್ಯಾಜ್ಯ ನಿರ್ವಣೆ ಮಾದರಿ ತಾರಸಿ ತೋಟ, ಕೈ ತೋಟದ ವಿಕ್ಷಣೆ, ಪ್ರಗತಿ ಪರ ಕೃಷಿಕರಿಗೆ ಸನ್ಮಾನ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ವತಿಯಿಂದ ಸಂಜೆ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ ಎಂದರು. ತೋಟಗಾರಿಕ ಇಲಾಖೆ ಸಹಾಯಕ ನಿರ್ದೇಶಕ ಎಲ್.ಹೇಮಂತ್ ಕುಮಾರ್ ಇದ್ದರು.