ಶ್ರೀನಗರ: ವಿರೋಧ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಶಾಸಕ ಅಕ್ಬರ್ ಲೋನ್ ಶನಿವಾರ ಜಮ್ಮು–ಕಾಶ್ಮೀರ ವಿಧಾನಸಭೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ.
ಬಿಜೆಪಿ ಶಾಸಕರು ಪಾಕಿಸ್ತಾನ ವಿರೋಧಿ ಘೋಷಣೆ ಕೂಗಿದ್ದಕ್ಕೆ ಪ್ರತಿಯಾಗಿ ಹೀಗೆ ಮಾಡಿದ್ದಾಗಿ ಅವರು ಹೇಳಿದ್ದಾರೆ. ಇದನ್ನು ನ್ಯಾಶನಲ್ ಕಾನ್ಫರೆನ್ಸ್ ಖಂಡಿಸಿದೆ.
‘ದ್ವಿರಾಷ್ಟ್ರ ಕಲ್ಪನೆ ನಿರಾಕರಿಸಿದ ನ್ಯಾಶನಲ್ ಕಾನ್ಫರೆನ್ಸ್ ಶಾಸಕ ಎನ್ನುವುದನ್ನು ಅಕ್ಬರ್ ಲೋನ್ ಮರೆಯಬಾರದು. ಅವರ ವರ್ತನೆ ಖಂಡನೀಯ’ಎಂದು ಪಕ್ಷ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
‘ನಾನು ಮೊದಲು ಮುಸ್ಲಿಂ. ಬಿಜೆಪಿ ಶಾಸಕರು ಪಾಕಿಸ್ತಾನ ವಿರೋಧಿ ಘೋಷಣೆ ಕೂಗಿದಾಗ ನನ್ನ ಭಾವನೆಗಳಿಗೆ ಘಾಸಿ ಆಯಿತು. ನನ್ನ ಭಾವನೆ ಹತ್ತಿಕ್ಕಲು ಸಾಧ್ಯವಾಗಲಿಲ್ಲ. ಆದ್ದರಿಂದ ಪಾಕಿಸ್ತಾನ ಪರ ಘೋಷಣೆ ಕೂಗಿದೆ’ ಎಂದು ಲೋನ್ ಹೇಳಿದ್ದಾರೆ.
ಜಮ್ಮುವಿನಲ್ಲಿ ಸೇನಾ ಶಿಬಿರದ ಮೇಲೆ ನಡೆದ ದಾಳಿಗೆ ರೋಹಿಂಗ್ಯ ಮುಸ್ಲಿಮರು ಕಾರಣ ಎಂದು ಸ್ಪೀಕರ್ ಕವಿಂದರ್ ಗುಪ್ತ ಆರೋಪಿಸಿದರು.
ಇದು ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಪಿಡಿಪಿ ಶಾಸಕರ ಆಕ್ರೋಶಕ್ಕೆ ಕಾರಣವಾಯಿತು. ಭದ್ರತಾ ಲೋಪಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ದೂಷಿಸಬೇಕೆ ಹೊರತು ಯಾವುದೇ ನಿರ್ದಿಷ್ಟ ಸಮುದಾಯವನ್ನಲ್ಲ ಎಂದು ಎರಡೂ ಪಕ್ಷಗಳ ಸದಸ್ಯರು ತರಾಟೆಗೆ ತೆಗೆದುಕೊಂಡರು.
ಮತ್ತೊಂದೆಡೆ ಬಿಜೆಪಿ ನಾಯಕರು, ದಾಳಿಯಲ್ಲಿ ಪಾಕಿಸ್ತಾನ ನೇರವಾಗಿ ಭಾಗಿಯಾಗಿದೆ ಎಂದು ಘೋಷಣೆ ಕೂಗಿದರು. ಇದು ಗದ್ದಲಕ್ಕೆ ಕಾರಣವಾಯಿತು.
**
‘ಶಾಸಕ ಲೋನ್ ಹೇಳಿಕೆ ಯಾವುದೇ ಕಾರಣಕ್ಕೂ ಸ್ವೀಕಾರ ಅರ್ಹವಲ್ಲ’
–ಫಾರೂಕ್ ಅಬ್ದುಲ್ಲಾ , ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಅಧ್ಯಕ್ಷ