ನವದೆಹಲಿ: ಕೇಂದ್ರ ಸರ್ಕಾರದ ಪ್ರಾದೇಶಿಕ ವಾಯು ಸಂಪರ್ಕ ಯೋಜನೆ–ಉಡಾನ್ ಅಡಿ ರಾಜ್ಯದ ಮೂರು ಮಾರ್ಗಗಳಲ್ಲಿ ಮಾರ್ಚ್ನಿಂದ ವಿಮಾನ ಸೇವೆಗಳು ಆರಂಭವಾಗಲಿವೆ.
ಬಳ್ಳಾರಿಯ ವಿದ್ಯಾನಗರ (ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ)–ಬೆಂಗಳೂರು, ಬೆಂಗಳೂರು– ಸೇಲಂ ಮತ್ತು ಮೈಸೂರು–ಚೆನ್ನೈಗಳ ಮಧ್ಯೆ ವಿಮಾನ ಸೇವೆ ಆರಂಭವಾಗಲಿದೆ. ಮೂರೂ ಮಾರ್ಗಗಳಲ್ಲಿ ಎರಡೂ ಕಡೆಯಿಂದ ವಿಮಾನ ಸೇವೆ ಇರಲಿವೆ. ಮೊದಲ ಹಂತದ ಉಡಾನ್ ಯೋಜನೆ ಅಡಿ ಈ ಸೇವೆಗಳು ಜಾರಿಗೆ ಬರಲಿವೆ.
ವಿದ್ಯಾನಗರ ಮತ್ತು ಬೆಂಗಳೂರು ಮಧ್ಯೆ ಹಾರಾಟ ಸೇವೆಯನ್ನು ಟ್ರೂಜೆಟ್ ಕಂಪೆನಿ ಒದಗಿಸಲಿದೆ. ಬೆಂಗಳೂರು–ಸೇಲಂ ಮತ್ತು ಮೈಸೂರು–ಚೆನ್ನೈ ಮಾರ್ಗಗಳಲ್ಲಿ ಏರ್ ಒಡಿಶಾ ಸೇವೆ ಒದಗಿಸಲಿದೆ. ಉಡಾನ್ ಯೋಜನೆಯ ಮೊದಲ ಹಂತದಲ್ಲಿ 97 ಮಾರ್ಗಗಳಲ್ಲಿ ವಿಮಾನ ಸೇವೆ ಆರಂಭವಾಗಬೇಕಿದೆ. ಅವುಗಳಲ್ಲಿ 51 ಮಾರ್ಗಗಳಲ್ಲಿ ಸೇವೆ ಮಾರ್ಚ್ನಲ್ಲೇ ಆರಂಭವಾಗಲಿದೆ.
ಉಡಾನ್ ಯೋಜನೆಯ ಎರಡನೇ ಹಂತದ ಮಾರ್ಗಗಳನ್ನು ಈಗಾಗಲೇ ವಿಮಾನಯಾನ ಸೇವಾ ಕಂಪನಿಗಳಿಗೆ ಹಂಚಿಕೆ ಮಾಡಲಾಗಿದೆ. ಈ ಮಾರ್ಗಗಳಲ್ಲಿ ಬೆಂಗಳೂರು–ಕೊಪ್ಪಳ ಮತ್ತು ಹುಬ್ಬಳ್ಳಿ–ಅಹಮದಾಬಾದ್ ಮಾರ್ಗಗಳೂ ಸೇರಿವೆ.