ವಿಜಯಪುರ: ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ‘ಹಮ್ಸಫರ್’ ರೈಲು ಸಂಚಾರವನ್ನು ಫೆ. 19ರಿಂದ ಆರಂಭಿಸಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಭಾನುವಾರ ಇಲ್ಲಿ ತಿಳಿಸಿದರು.
ಮೈಸೂರಿನಿಂದ ಸಂಚಾರ ಆರಂಭಿಸುವ ಈ ರೈಲು, ಬೆಂಗಳೂರು–ಹುಬ್ಬಳ್ಳಿ–ಬೆಳಗಾವಿ ಮೂಲಕ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಪ್ರವೇಶಿಸಿ, ಅಲ್ಲಿಂದ ನವದೆಹಲಿಯನ್ನು ತಲುಪಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರೈಲ್ವೆ ಜಾಲವನ್ನು ಸಂಪೂರ್ಣ ವಿದ್ಯುದೀಕರಣಗೊಳಿಸುವ ಮಹತ್ವದ ಸಂಕಲ್ಪವನ್ನು ಕೇಂದ್ರ ಸರ್ಕಾರ ಮಾಡಿದೆ. ಆರು ವರ್ಷದ ಅವಧಿಯಲ್ಲಿ ಎಲ್ಲ ಜಾಲವನ್ನು ವಿದ್ಯುದೀಕರಣಗೊಳಿಸಲಾಗುವುದು. ಇದು ಪೂರ್ಣಗೊಂಡರೆ, ಇಲಾಖೆಗೆ ವಾರ್ಷಿಕ ₹ 10,500 ಕೋಟಿ ಉಳಿತಾಯವಾಗಲಿದೆ ಎಂದರು.
ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ, ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಠ– ಮಂದಿರಗಳಿಗೆ ಭೇಟಿ ನೀಡುವ ಮೂಲಕ ಜನರನ್ನು ಮೂರ್ಖರನ್ನಾಗಿಸುವ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದರು.