ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ವಂಚನೆ ಪ್ರಕರಣವು ಹೂಡಿಕೆ ಚಟುವಟಿಕೆಯನ್ನು ಗಮನಾರ್ಹವಾಗಿ ತಗ್ಗಿಸಿದೆ. ಇದರಿಂದ ದೇಶದ ಷೇರುಪೇಟೆಗಳಲ್ಲಿ ಇಳಿಮುಖ ವಹಿವಾಟು ನಡೆಯುತ್ತಿದೆ.
ಸೋಮವಾರದ ವಹಿವಾಟಿನಲ್ಲಿ ಬ್ಯಾಂಕಿಂಗ್, ಲೋಹ ವಲಯದ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾದವು.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ಇ) 236 ಅಂಶ ಇಳಿಕೆ ಕಂಡು ಎರಡು ವಾರಗಳ ಕನಿಷ್ಠ ಮಟ್ಟವಾದ 33,775 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 74 ಅಂಶ ಇಳಿಕೆಯಾಗಿ 10,378 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.
ಷೇರುಪೇಟೆಯಲ್ಲಿ ಹೂಡಿಕೆ ಚಟುವಟಿಕೆಯ ಮೇಲೆ ದೇಶಿ ವಿದ್ಯಮಾನಗಳ ಪ್ರಭಾವ ಮುಂದುವರಿಯಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣವು ಷೇರುಪೇಟೆಯಲ್ಲಿ ಸೃಷ್ಟಿಸಿರುವ ಒತ್ತಡ ಸದ್ಯದ ಮಟ್ಟಿಗೆ ತಗ್ಗುವ ಸಾಧ್ಯತೆ ಕಂಡುಬರುತ್ತಿಲ್ಲ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಅಭಿಪ್ರಾಯಪಟ್ಟಿದ್ದಾರೆ.
ತೈಲ ಬೆಲೆ ಮತ್ತೆ ಚೇತರಿಕೆ ಕಂಡುಕೊಳ್ಳುತ್ತಿದೆ. ಇದು ದೇಶದ ವಿತ್ತೀಯ ಕೊರತೆ ಅಂತರವನ್ನು ಹೆಚ್ಚಿಸುವ ಆತಂಕ ಸೃಷ್ಟಿಸಿರುವುದೂ ಸಹ ಎಚ್ಚರಿಕೆಯ ವಹಿವಾಟು ನಡೆಯುವಂತೆ ಮಾಡಿದೆ.