ನರಸಿಂಹರಾಜಪುರ: ರಾಷ್ಟ್ರೀಯ ರಸ್ತೆ ಸುರಕ್ಷಾ ನಿಧಿಯಿಂದ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಸಂಪರ್ಕಿಸುವ ಎಲ್ಲ ಅಡ್ಡರಸ್ತೆಗಳಲ್ಲಿ 200 ಮೀಟರ್ ಡಾಂಬರು ಹಾಕಿ ಅಭಿವೃದ್ಧಿ ಕಾಮಗಾರಿ ಕ್ಷೇತ್ರದಾದ್ಯಂತ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಡಿ.ಎನ್.ಜೀವರಾಜ್ ತಿಳಿಸಿದರು.
ಇಲ್ಲಿನ ಬಸ್ತಿಮಠದಲ್ಲಿ ಗುರುವಾರ ನಗರೋತ್ಥಾನ ಯೋಜನೆಯ ₹2 ಕೋಟಿ ಅನುದಾನದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ನಗರೋತ್ಥಾನ ಯೋಜನೆಯಡಿ ಪ್ರತಿ ವರ್ಷ ನಗರಗಳ ಮೂಲ ಸೌಕರ್ಯ ಅಭಿವೃದ್ಧಿ ಹಿಂದೆ ₹5 ಕೋಟಿ ನೀಡಲಾಗುತ್ತಿತ್ತು. 2013ರಿಂದ ಈಚೆಗೆ ಇದೇ ಮೊದಲ ಬಾರಿಗೆ ನಗರಗಳ ಮೂಲ ಸೌಕರ್ಯ ₹2ಕೋಟಿ ಅನುದಾನ ಬಂದಿದೆ. ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲ್ಲೂಕಿಗೂ ಅನುದಾನ ಬಂದಿದ್ದು, ಉಳಿದ ಎರಡು ತಾಲ್ಲೂಕಿನಲ್ಲಿ ಈಗಾಗಲೇ ಕಾಮಗಾರಿ ಪ್ರಾರಂಭವಾಗಿದೆ ಎಂದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯ ಒಳಗೆ ಶವಗಾರಕ್ಕೆ ಹೋಗುವ ರಸ್ತೆ, ಪತ್ರಕರ್ತರ ಭವನದಿಂದ ಗುಬ್ಬಿಗೆರೆ ರೈಸ್ ಮೀಲ್ ವರೆಗಿನ ರಸ್ತೆ, ಗುತ್ತ್ಯಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು. ಕೆಲವು ಕಡೆ ಚರಂಡಿ ನಿರ್ಮಾಣ ಮಾಡಲಾಗುವುದು ಎಂದರು.
ಕ್ಷೇತ್ರದಲ್ಲಿ ಅಪಘಾತಗಳು ಸಂಭವಿಸುವ ಸ್ಥಳಗಳಲ್ಲಿ ರಸ್ತೆ ವಿಸ್ತರಣೆಗೆ ₹20ಕೋಟಿ ಬಿಡುಗಡೆಯಾಗಿದ್ದು ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಪಟ್ಟಣದ ಮೆಣಸೂರು ಗ್ರಾಮ ಪಂಚಾಯಿತಿ ಸಮೀಪದಿಂದ ಹಾದು ಹೋಗುವ ಶಿವಮೊಗ್ಗ ಮುಖ್ಯರಸ್ತೆಯ ಎರಡು ಬದಿ ವಿಸ್ತರಣೆ ಮಾಡಲಾಗುವುದು. ಮಡಬೂರು ಗ್ರಾಮಕ್ಕೆ ಹೋಗುವ ಮುಖ್ಯರಸ್ತೆ ಉಬ್ಬು, ತಗ್ಗುಗಳಿಂದ ಕೂಡಿದ್ದು ಇದನ್ನು ಸಮತಟ್ಟು ಮಾಡಿ ಅಭಿವೃದ್ಧಿ ಪಡಿಸಲಾಗುವುದು. ಮುತ್ತಿನಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿರುವ ವೃತ್ತಾಕರದ ರಸ್ತೆ, ಮುಂಡೊಳ್ಳಿ, ಹೆಗ್ಗೆರೆ ಕಾಲೋನಿ, ಸಿಗುವಾನಿ, ಸಾರ್ಯ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಆರ್.ರಾಜಶೇಖರ್, ಉಪಾಧ್ಯಕ್ಷೆ ಸಾವಿತ್ರಿ, ಸದಸ್ಯರಾದ ಲಕ್ಷ್ಮಣ್ ಶೆಟ್ಟಿ, ಸುಕುಮಾರ್, ಸುನಿಲ್ಕುಮಾರ್, ನಾಗಭೂಷಣ್, ಸಮೀರಾನಹೀಂ, ನಾಗರತ್ನ, ನಾಗಭೂಷಣ್, ಮುಖ್ಯಾಧಿಕಾರಿ ಕುರಿಯಾಕೋಸ್ ಇದ್ದರು.