ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಆಸ್ಪತ್ರೆ ಎನ್‌ಐಸಿಯು ಘಟಕಕ್ಕೆ ಆಕಸ್ಮಿಕ ಬೆಂಕಿ, ಸಿಬ್ಬಂದಿ ಪ್ರಜ್ಞೆಯಿಂದ 29 ಮಕ್ಕಳ ರಕ್ಷಣೆ

Last Updated 2 ಮಾರ್ಚ್ 2018, 16:23 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಆಸ್ಪತ್ರೆಯ ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿನ(ಎನ್‌.ಐ. ಸಿ.ಯು) ಹವಾನಿಯಂತ್ರಿತ (ಎ.ಸಿ) ಯಂತ್ರದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಶುಕ್ರವಾರ ಸಂಜೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದೆ.

ಘಟಕದಲ್ಲಿ ಮಕ್ಕಳ ಆರೈಕೆಯಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿ  ಸಿದ್ದಮ್ಮ ಮತ್ತು ರಮೇಶ್ ಅವರ ಸಮಯ ಪ್ರಜ್ಞೆಯಿಂದ 29 ಮಕ್ಕಳನ್ನು ಆಸ್ಪತ್ರೆಯ ಸಿಬ್ಬಂದಿ ಮತ್ತು ಪೋಷಕರು ರಕ್ಷಣೆ ಮಾಡಿದ್ದಾರೆ. ಬಳಿಕ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಮಕ್ಕಳ ರಕ್ಷಣೆ ಮಾಡುವಾಗ ಹೊಗೆ ಕುಡಿದು ಅಸ್ವಸ್ಥರಾದ ರಮೇಶ್ ಅವರಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ನೀಡಲಾಗುತ್ತಿದೆ.

’ಎಲ್ಲ 29 ನವಜಾತ ಶಿಶುಗಳು ಸುರಕ್ಷಿತವಾಗಿದ್ದು, ತಾಯಂದಿರ ಮಡಿಲಲ್ಲಿ ಇದ್ದಾರೆ. ನಗರದ ಶ್ರೀದೇವಿ ಮೆಡಿಕಲ್ ಕಾಲೇಜು ಮತ್ತು ಸಿದ್ಧಗಂಗಾ ಆಸ್ಪತ್ರೆಯ ನವಜಾತ ಶಿಶು ತೀವ್ರ ನಿಗಾ ಘಟಕಕ್ಕೆ ಮಕ್ಕಳನ್ನು ಸ್ಥಳಾಂತರಿಸಿ ಆರೈಕೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ವೀರಭದ್ರಯ್ಯ ಸುದ್ದಿಗಾರರಿಗೆ ತಿಳಿಸಿದರು.

’ಎನ್‌ಐಸಿಯು ಘಟಕದಲ್ಲಿ ಎರಡು ವಿಭಾಗಗಳಿದ್ದು, ಒಂದು ವಿಭಾಗದಲ್ಲಿ 19 ಮತ್ತು  ಮತ್ತೊಂದು ವಿಭಾಗದಲ್ಲಿ 10 ಮಕ್ಕಳಿದ್ದವು. 19 ಮಕ್ಕಳಿದ್ದ ವಿಭಾಗದಲ್ಲಿದ್ದ ಹವಾನಿಯಂತ್ರಿತ ಯಂತ್ರದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಆಗಿದೆ. ಘಟನೆ ಕುರಿತು ತನಿಖೆ ನಡೆಸಿ ವರದಿ ನೀಡಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

ವಿವರ: ಸಂಜೆ 7 ಗಂಟೆ ಹೊತ್ತಿಗೆ ಎನ್ಐಸಿಯು ಘಟಕದಲ್ಲಿ ಸುಟ್ಟ ವಾಸನೆ ಬಂದಿದೆ. ಇದನ್ನು ಗಮನಿಸಿದ ಸಿಬ್ಬಂದಿ ಅಲಾರಾಂ ಬಟನ್ ಒತ್ತಿ ರಕ್ಷಣೆಗೆ ಕೂಗಿದ್ದಾರೆ. ಆಸ್ಪತ್ರೆಯ ಇತರ ಸಿಬ್ಬಂದಿ, ವೈದ್ಯರು, ಮಕ್ಕಳ ಪೋಷಕರು ಬರುವಷ್ಟರಲ್ಲಿ ಬೆಂಕಿ ಹೊತ್ತಿಕೊಂಡಿದೆ. ಎಲ್ಲ ಮಕ್ಕಳನ್ನು ಬೇರೆ ವಾರ್ಡ್‌ ಸ್ಥಳಾಂತರಿಸಿ ರಕ್ಷಣೆ ಮಾಡಿದ್ದಾರೆ.

ಬಳಿಕ ಘಟಕದ ಗಾಜುಗಳನ್ನು ಒಡೆದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿಯೂ ಸಕಾಲಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಶಾಸಕ ಡಾ.ರಫೀಕ್ ಅಹಮದ್ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT