ಉಡುಪಿ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆ ಉಡುಪಿ ಜಿಲ್ಲೆಯಲ್ಲಿ ಪ್ರಚಾರದ ಭರಾಟೆಯೂ ಮೇರೆ ಮೀರುತ್ತಿದೆ. ಸಾಮಾಜಿಕ ಮಾಧ್ಯಮ ಬಳಕೆಯಲ್ಲಿ ಮುಂದಿರುವ ಉಡುಪಿ ಜಿಲ್ಲೆಯ ವಿವಿಧ ಪಕ್ಷಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ತಮ್ಮ ನೆಚ್ಚಿನ ಪಕ್ಷ– ಅಭ್ಯರ್ಥಿ ಪರವಾಗಿ ಫೇಸ್ಬುಕ್ ಪ್ರೊಫೈಲ್ ಫ್ರೇಮ್ ಮೂಲಕ ತಣ್ಣನೆ ಪ್ರಚಾರದಲ್ಲಿ ತೊಡಗಿರುವುದು ಗಮನ ಸೆಳೆಯುತ್ತಿದೆ.
ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿಯೂ ಈ ಬಾರಿ ಕಾಂಗ್ರೆಸ್– ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಅದಕ್ಕೆ ಮುನ್ಸೂಚನೆ ಎಂಬಂತೆ ಫೇಸ್ಬುಕ್ ಫ್ರೊಫೈಲ್ ಚಿತ್ರದ ಪೈಪೋಟಿಯೂ ಜೋರಾಗಿದೆ. ಕಾಂಗ್ರೆಸ್ ಮುಖಂಡರ ಅಬ್ಬರ ಬಿಜೆಪಿಗಿಂತ ಸ್ವಲ್ಪ ಜೋರಾಗಿದೆ. ಸಚಿವ ಪ್ರಮೋದ್ ಮಧ್ವರಾಜ್ ಅವರ ಬೆಂಬಲಿಗರು ಈಗಾಗಲೇ ಬಗೆ ಬಗೆಯ ಫ್ರೇಮ್ಗಳಲ್ಲಿ ತಮ್ಮ ನಾಯಕನ ಪರ ಮತ ಕೇಳಲಾರಂಭಿಸಿದ್ದಾರೆ.
ಕಾರ್ಕಳ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಉದಯ ಶೆಟ್ಟಿ ಮುನಿಯಾಲು, ಬೈಂದೂರು ಕ್ಷೇತ್ರದ ಸಂಭವನೀಯ ಬಿಜೆಪಿ ಅಭ್ಯರ್ಥಿ ಬಿ.ಎಂ. ಸುಕುಮಾರ ಶೆಟ್ಟಿ, ಇದೇ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಪರ ಪ್ರಚಾರ ಜೋರಾಗಿದೆ.
ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಬೆಂಬಲಿಗರೂ ಹಿಂದೆ ಬಿದ್ದಿಲ್ಲ. ಬಹುತೇಕ ಕಾಂಗ್ರೆಸ್ ಬೆಂಬಲಿಗರು ಸ್ಥಳೀಯ ನಾಯಕನ ಪರ ಪ್ರಚಾರದಲ್ಲಿ ತೊಡಗಿದ್ದರೆ, ಬಿಜೆಪಿ ಬೆಂಬಲಿಗರು ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಅವರ ಭಾವಚಿತ್ರ ಹಾಗೂ ಕಮಲದ ಗುರುತಿನ ಫ್ರೇಮ್ ಮೂಲಕ ಪ್ರಚಾರ ನಡೆಸುತ್ತಿದ್ದಾರೆ.