ನವದೆಹಲಿ: ಐಎನ್ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ಬಂಧನದಲ್ಲಿದ್ದ ಕಾಂಗ್ರೆಸ್ನ ಹಿರಿಯ ಮುಖಂಡ ಪಿ. ಚಿದಂಬರಂ ಮಗ ಕಾರ್ತಿ ಚಿದಂಬರಂ ಅವರ ನ್ಯಾಯಾಂಗ ಬಂಧನಕ್ಕೆ ದೆಹಲಿ ಕೋರ್ಟ್ ಸೋಮವಾರ ಆದೇಶಿಸಿದೆ.
ಮುಂಚಿತವಾಗಿಯೇ ಜಾಮೀನು ಅರ್ಜಿ ವಿಚಾರಣೆಗೆ ಅಸಮ್ಮತಿಸಿದ ಕೋರ್ಟ್ನ ವಿಶೇಷ ನ್ಯಾಯಾಧೀಶ ಸುನಿಲ್ ರಾಣಾ ಮಾ.24ರವರೆಗೆ ಕಾರ್ತಿ ನ್ಯಾಯಾಂಗ ಬಂಧನ ಆದೇಶ ಪ್ರಕಟಿಸಿದರು.
ತಿಹಾರ್ ಜೈಲಿನಲ್ಲಿ ಪ್ರತ್ಯೇಕ ಸೆಲ್ ಹಾಗೂ ರಕ್ಷಣೆ ಒದಗಿಸುವಂತೆ ಕಾರ್ತಿ ಮನವಿ ಮಾಡಿದರು. ಜೈಲಿನ ನಿಯಾಮಳಿಯಂತೆ ಕ್ರಮವಹಿಸುವಂತೆ ಸೂಚಿಸಿದ ಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನು ಮಾ.15ಕ್ಕೆ ನಿಗದಿ ಪಡಿಸಿದೆ.
ಜೈನಿನಲ್ಲಿ ಮನೆಯ ಊಟ ನೀಡುವುದಕ್ಕೆ ಕೋರ್ಟ್ ಒಪ್ಪಿಗೆ ನೀಡಿಲ್ಲ.
ಜಾರಿ ನಿರ್ದೇಶನಾಲಯದ(ಇಡಿ) ದಾಖಲಿಸಿರುವ ಪ್ರಕರಣದಲ್ಲಿ ಜೈಲಿನಲ್ಲಿರುವ ಕಾರ್ತಿ ಚಿದಂಬರಂ ಸಿಎ ಎಸ್.ಭಾಸ್ಕರರಮಣನ್ ಸಿಬಿಐನ ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಫೆ.28ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧನವಾದ ಬಳಿಕ ಕಾರ್ತಿ 12 ದಿನಗಳು ಪೊಲೀಸ್ ವಿಚಾರಣೆ ಎದುರಿಸಿದ್ದಾರೆ.