ಮುಂಬೈ: ವಿವಿಧ ಬೇಡಿಕೆಗಳ ಈಡೇರಿಕೆಗೆ ನಾಸಿಕ್ನಿಂದ 180 ಕಿಲೋಮೀಟರ್ ದೂರದ ಮುಂಬೈಗೆ ಕಾಲ್ನಡಿಗೆಯಲ್ಲಿ ಬಂದು ಪ್ರತಿಭಟನೆ ನಡೆಸಿದ ಮಹಾರಾಷ್ಟ್ರದ ರೈತರು ಸೋಮವಾರ ಪ್ರತಿಭಟನೆ ಹಿಂಪಡೆದಿದ್ದಾರೆ.
ಅಖಿಲ ಭಾರತೀಯ ಕಿಸಾನ್ ಸಭಾ, ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ವಾದ) ರೈತ ವಿಭಾಗದ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಗೆ ಸ್ಪಂದಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸರ್ಕಾರ, ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದೆ.
'ರೈತರು ಮುಂದಿಟ್ಟ 13 ಬೇಡಿಕೆಗಳಲ್ಲಿ 12 ಬೇಡಿಕೆಗಳ ಕುರಿತು ಸರ್ಕಾರ ಚರ್ಚಿಸಿದ್ದು, ಅನೇಕ ಬೇಡಿಕೆಗಳನ್ನು ಕೂಡಲೇ ಈಡೇಸಲಾಗುತ್ತದೆ. ಕೆಲವು ಬೇಡಿಕೆಗಳಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಮುಂದಿನ ಆರು ತಿಂಗಳಲ್ಲಿ ಪರಿಹರಿಸಿ ಪೂರೈಸಲಾಗುತ್ತದೆ' ಎಂದು ಸಚಿವ ಗಿರೀಶ್ ಮಹಾಜನ್ ತಿಳಿಸಿದರು.
ಪ್ರಮುಖಾಂಶಗಳು:
* ಗಂಡ–ಹೆಂಡತಿ ಇಬ್ಬರ ಹೆಸರಿನಲ್ಲಿಯೂ ಇರುವ ಸಾಲ ಮನ್ನಾ ಮಾಡಲು ಸರ್ಕಾರದ ಕ್ರಮ. ₹1.5 ಲಕ್ಷದ ಮಿತಿ
* ಉತ್ಪಾದನೆಯ ವೆಚ್ಚದ 1.5ರಷ್ಟು ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸುವುದಾಗಿ ಸಿಎಂ ದೇವೇಂದ್ರ ಫಡಣವೀಸ್ ಭರವಸೆ
* ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ರೈತರನ್ನು ಸ್ವಗ್ರಾಮಗಳಿಗೆ ಕಳುಹಿಸಲು ಸೋಮವಾರ ಸಂಜೆಗೆ ಎರಡು ವಿಶೇಷ ರೈಲುಗಳ ವ್ಯವಸ್ಥೆ