ರಾಮನಗರ: ಮಾಗಡಿ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಶಾಸಕ ಎಚ್.ಸಿ. ಬಾಲಕೃಷ್ಣ ಬೆಂಬಲಿಗರು ಹಾಗೂ ಜೆಡಿಎಸ್ ಅಭ್ಯರ್ಥಿ ಎ. ಮಂಜು ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.
ಘಟನೆಯಲ್ಲಿ ಜೆಡಿಎಸ್ ಬೆಂಬಲಿಗರಾದ ಪುರಸಭೆ ಸದಸ್ಯ ಬಾಲರಾಜು ಹಾಗೂ ಮುಖಂಡರಾದ ಮುನಿರಾಜು ಹಾಗೂ ಜವರೇಗೌಡ ಎಂಬುವರು ಗಾಯಗೊಂಡಿದ್ದಾರೆ. ಬಾಲಕೃಷ್ಣ ಬೆಂಬಲಿಗರಾದ ಪುರಸಭೆ ಮಾಜಿ ಅಧ್ಯಕ್ಷ ಪುರುಷೋತ್ತಮ ಹಾಗೂ ಗುಂಪು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಮಾಗಡಿ ಪೊಲೀಸ್ ಠಾಣೆ ಮುಂಭಾಗ ಬುಧವಾರ ಬೆಳಿಗ್ಗೆ ನೂರಾರು ಜೆಡಿಎಸ್ ಕಾರ್ಯಕರ್ತರು ಜಮಾಯಿಸಿದ್ದರು. ಮಾಗಡಿ ಟೌನ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದೆ.