ಕೋಲಾರ: ನಗರದ ವಿವಿಧೆಡೆ ಹಾಕಲಾಗಿದ್ದ ಬಿಜೆಪಿ ಮುಖಂಡ ರಾಜೇಶ್ಗೌಡ ಅವರ ಫ್ಲೆಕ್ಸ್ಗಳನ್ನು ಪಕ್ಷದ ಕಾರ್ಯಕರ್ತರೇ ಮಂಗಳವಾರ ಸಂಜೆ ಕಿತ್ತೆಸೆದರು.
‘ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಸ್ಥಳೀಯವಾಗಿ ಪಕ್ಷದ ಮೂರ್ನಾಲ್ಕು ಮಂದಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ನಡುವೆ ಹೊರಗಿನಿಂದ ವಲಸೆ ಬಂದಿರುವ ರಾಜೇಶ್ಗೌಡ ಅವರು ನಗರದ ಹಲವೆಡೆ ಪಕ್ಷದ ಚಿಹ್ನೆಯ ಜತೆ ತಮ್ಮ ಫ್ಲೆಕ್ಸ್ ಹಾಕಿಸಿಕೊಂಡು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ’ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
‘ಸ್ಥಳೀಯ ಮುಖಂಡರು ಹಲವು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಿಂಗಳ ಹಿಂದೆ ಕ್ಷೇತ್ರಕ್ಕೆ ಕಾಲಿಟ್ಟಿರುವ ರಾಜೇಶ್ಗೌಡ ಅವರು ಮೂರ್ನಾಲ್ಕು ಮಂದಿಯನ್ನು ಹಿಂದೆ ಹಾಕಿಕೊಂಡು ತಾನೇ ಬಿಜೆಪಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇದರಿಂದ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ’ ಎಂದು ಆರೋಪಿಸಿದರು.
‘ಕ್ಷೇತ್ರದಲ್ಲಿ ಈ ಬಾರಿ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬುದು ಕಾರ್ಯಕರ್ತರ ಒತ್ತಾಯವಾಗಿದೆ. ಕ್ಷೇತ್ರದಲ್ಲಿ ಪಕ್ಷದ ಯಾವುದೇ ಮುಖಂಡರನ್ನು ಭೇಟಿಯಾಗದ ರಾಜೇಶ್ಗೌಡ ಯಾರೆಂದು ಕಾರ್ಯಕರ್ತರಿಗೆ ಗೊತ್ತಿಲ್ಲ. ಅವರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ’ ಎಂದು ದೂರಿದರು.