ಕಲಬುರ್ಗಿ: ತಾಲ್ಲೂಕಿನ ಹಸನಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಂಗಳವಾರ ಹಲ್ಲೆ ಮಾಡಿದ ಕಾಂಗ್ರೆಸ್ ಮುಖಂಡ ಸೀತಾರಾಮ ಸುಬೇದಾರ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಯಿಂದ ಆಘಾತಕ್ಕೆ ಒಳಗಾಗಿರುವ ಲಕ್ಕಪ್ಪ ಪೂಜಾರಿ (55) ಚಿಕಿತ್ಸೆಗಾಗಿ ಇಲ್ಲಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ.
‘ಸೀತಾರಾಮ ಅವರು ತಮ್ಮ ವಾಹನದಲ್ಲಿ ಹಸನಾಪುರ ಗ್ರಾಮದಲ್ಲಿ ತೆರಳುತ್ತಿದ್ದರು. ಈ ವೇಳೆ ಲಕ್ಕಪ್ಪ ನಮಸ್ಕಾರ ಮಾಡಲಿಲ್ಲ ಎಂಬ ಕಾರಣಕ್ಕೆ ಕುಪಿತಗೊಂಡು ಕೆನ್ನೆಗೆ ಹೊಡೆದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
‘ಸೀತಾರಾಮ ಚಲಾಯಿಸುತ್ತಿದ್ದ ಸ್ಕಾರ್ಪಿಯೊ ವಾಹನದ ಚಕ್ರಕ್ಕೆ ಸಿಲುಕಿದ ಕಲ್ಲು ಜೋರಾಗಿ ಸಿಡಿದು ಲಕ್ಕಪ್ಪ ಅವರಿಗೆ ಬಡಿದಿದೆ. ಆಗ ಸಿಟ್ಟಿಗೆದ್ದ ಲಕ್ಕಪ್ಪ ಹರಿಹಾಯ್ದಿದ್ದಾರೆ. ಇದರಿಂದ ರೊಚ್ಚಿಗೆದ್ದ ಸೀತಾರಾಮ ಈ ಹಿಂದೆ ತಾವು ಕೊಟ್ಟಿದ್ದ ಸಾಲವನ್ನು ಮರಳಿಸುವಂತೆ ಒತ್ತಾಯಿಸಿದ್ದಾರೆ. ಮಾತಿಗೆ ಮಾತು ಬೆಳೆದು ಹೊಡೆದಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಸೀತಾರಾಮ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾಗಿದ್ದು, ಶಾಸಕರಾದ ಡಾ.ಅಜಯ್ಸಿಂಗ್ ಮತ್ತು ಮಾಲೀಕಯ್ಯ ಗುತ್ತೇದಾರ ಅವರ ಆಪ್ತರಾಗಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.