ಮುಂಬೈ: ಉಬರ್ ಮತ್ತು ಓಲಾ ಕ್ಯಾಬ್ ಚಾಲಕರು ಮಾರ್ಚ್ 18, ಭಾನುವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡುವುದಾಗಿ ಬೆದರಿಕೆಯೊಡ್ಡಿದ್ದಾರೆ.
ಮುಂಬೈ, ನವದೆಹಲಿ, ಬೆಂಗಳೂರು, ಹೈದರಾಬಾದ್, ಪುಣೆ ಮೊದಲಾದ ನಗರಗಳಲ್ಲಿ ಮುಷ್ಕರ ಸಾಧ್ಯತೆ ಇದೆ.
ಓಲಾ ಮತ್ತು ಉಬರ್ ಕ್ಯಾಬ್ನವರು ಅದರ ಚಾಲಕರಿಗೆ ಭರವಸೆ ನೀಡಿದ್ದರೂ ಅದು ಯಾವುದನ್ನೂ ಈಡೇರಿಸಿಲ್ಲ. ಅವರು ₹5-₹7 ಲಕ್ಷ ಹೂಡಿಕೆ ಮಾಡಿರುವುದರಿಂದ ತಿಂಗಳಿಗೆ ₹1.5 ಲಕ್ಷ ಗಳಿಸುವ ನಿರೀಕ್ಷೆ ಹೊಂದಿದ್ದಾರೆ. ಆದರೆ ಈ ಕಂಪನಿಗಳ ಅವ್ಯವಸ್ಥೆಯಿಂದಾಗಿ ಇದರ ಅರ್ಧದಷ್ಟು ಹಣವನ್ನೂ ಗಳಿಸಲು ಸಾಧ್ಯವಾಗುತ್ತಿಲ್ಲ ಎಂದು ಮುಷ್ಕರಕ್ಕೆ ಕರೆ ನೀಡಿರುವ ಮಹಾರಾಷ್ಟ್ರ ನವನಿರ್ಮಾಣ್ ವಹಾತುಕ್ ಸೇನೆಯ ಸಂಜಯ್ ನಾಯ್ಕ್ ಹೇಳಿದ್ದಾರೆ.
ಟ್ಯಾಕ್ಸಿಗಳನ್ನು ಹೊಂದಿರುವ ಈ ಕಂಪನಿಗಳು ಚಾಲಕರೇ ಮಾಲೀಕರಾಗಿರುವ ವಾಹನಗಳಿಗೆ ಆದ್ಯತೆ ಕೊಡುವ ಬದಲು ಕಂಪನಿ ಮಾಲೀಕತ್ವದ ಕಾರುಗಳಿಗೆ ಆದ್ಯತೆ ನೀಡುತ್ತಿವೆ. ಈ ಕಂಪನಿಗಳು ಯಾವುದೇ ದೃಢೀಕರಣಗಳಿಲ್ಲದೆಯೇ ಮುದ್ರಾ ಯೋಜನೆ ಮೂಲಕ ಚಾಲಕರಿಗೆ ಲೋನ್ ಗ್ಯಾರಂಟಿ ಪತ್ರಗಳನ್ನು ನೀಡಿವೆ. ಇದೀಗ ಮರುಪಾವತಿ ಮಾಡಲೇ ಬೇಕಾದ ಪರಿಸ್ಥಿತಿ ಬಂದಿದೆ ಎಂದು ನಾಯ್ಕ್ ಹೇಳಿದ್ದಾರೆ.
ಈ ಮುಷ್ಕರದ ಬಗ್ಗೆ ಪ್ರತಿಕ್ರಿಯಿಸಲು ಓಲಾ ನಿರಾಕರಿಸಿದ್ದು, ಮುಷ್ಕರ ಇದೆ ಎಂಬುದು ವದಂತಿ ಮಾತ್ರ ಎಂದು ಉಬರ್ ವಕ್ತಾರರು ಹೇಳಿದ್ದಾರೆ.