ನವದೆಹಲಿ: ಬೆಂಗಳೂರಿನ ಬೆಳ್ಳಂದೂರು ಮತ್ತು ಅಗರ ಕೆರೆಗಳ ಬಫರ್ ವಲಯದ ನಿಯಮ ಉಲ್ಲಂಘಿಸಿದ ಆರೋಪ ಕುರಿತ ವರದಿ ಸಲ್ಲಿಸದೇ ₹5 ಲಕ್ಷ ದಂಡಕ್ಕೆ ಗುರಿಯಾಗಿರುವ ಮಂತ್ರಿ ಟೆಕ್ ಜೋನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ವಿಚಾರಣೆಗೆ ಹಾಜರಾಗುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಮಂಗಳವಾರ ಮತ್ತೆ ತಾಕೀತು ಮಾಡಿದೆ.
ನಿಯಮ ಉಲ್ಲಂಘನೆ ಕುರಿತ ವರದಿ ಸಲ್ಲಿಸದ ಕಾರಣದಿಂದ ಮಾರ್ಚ್ 14ರಂದು ದಂಡ ವಿಧಿಸಿ ಆದೇಶ ನೀಡಿದ್ದ ಡಾ.ಜವಾದ್ ರಹೀಂ ನೇತೃತ್ವದ ಹಸಿರು ಪೀಠವು, ವ್ಯವಸ್ಥಾಪಕ ನಿರ್ದೇಶಕ ಹಾಜರಾತಿಗೆ ಸೂಚಿಸಿತ್ತು.
ಆದರೆ, ಆದೇಶದ ಪ್ರತಿ ದೊರೆಯದ್ದರಿಂದ ಹಾಜರಾತಿ ಸಾಧ್ಯವಾಗಿಲ್ಲ ಎಂದು ಸಂಸ್ಥೆಯ ಪರ ವಕೀಲರಾದ ಮಹೇಶ ಗಿರಿ ತಿಳಿಸಿದ್ದರಿಂದ ಏಪ್ರಿಲ್ 5ಕ್ಕೆ ವಿಚಾರಣೆ ಮುಂದೂಡಿದ ಪೀಠವು, ‘ಅಂದು ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗುವಂತೆ ನಿಮ್ಮ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿ’ ಎಂದು ಹೇಳಿತು.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಯಲ್ಲಿ ₹5 ಲಕ್ಷ ದಂಡದ ಮೊತ್ತವನ್ನು ಪಾವತಿಸಲಾಗಿದೆಯೇ ಎಂದು ಪ್ರಶ್ನಿಸಿದ ನ್ಯಾಯಮೂರ್ತಿಯವರು ಅದರ ರಸೀದಿಯನ್ನು ಪ್ರಸ್ತುತಪಡಿಸುವಂತೆ ವಕೀಲರಿಗೆ ಸೂಚಿಸಿದರು.