ಬಾಗಲಕೋಟೆ: ಮಗನಿಗೆ ಗ್ರಾಮಸೇವಕ ಕೆಲಸ ನೀಡದ ಹಿನ್ನೆಲೆಯಲ್ಲಿ ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಮನೆ ಎದುರೇ ವಿಷಸೇವಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ಘಟನೆ ನಡೆದಿದೆ. ತಾಲ್ಲೂಕಿನ ಯರಗೊಪ್ಪ ಗ್ರಾಮದ ಶಾಂತವ್ವ ವಾಲಿಕಾರ(46)ಮೃತ ಮಹಿಳೆ
ಶಾಂತವ್ವ ಪತಿ ಗೋವಿಂದಪ್ಪ ಸಮೀಪದ ಮುತ್ತಲಗೇರಿ ಪಂಚಾಯ್ತಿಯಲ್ಲಿ ಗ್ರಾಮ ಸೇವಕರಾಗಿದ್ದರು. ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಪತಿಯ ನೌಕರಿ ಅನುಕಂಪದ ಆಧಾರದ ಮೇಲೆ ಮಗನಿಗೆ ನೀಡುವಂತೆ ಶಾಸಕರಿಗೆ ಶಾಂತವ್ವ ಮನವಿ ಸಲ್ಲಿಸಿದ್ದರು ಎನ್ನಲಾಗಿದೆ. ಆದರೆ ಕೆಲಸ ಕೊಟ್ಟಿರಲಿಲ್ಲ ಎನ್ನಲಾಗಿದೆ.
ಬದಲಿಗೆ ಶಾಸಕರ ಸಂಬಂಧಿಗೆ ಗ್ರಾಮಸೇವಕ ಕೆಲಸ ನೀಡಲಾಗಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತು ಮನನೊಂದು ಶಾಂತವ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆ ಶಾಸಕ ಚಿಮ್ಮನಕಟ್ಟಿ ಮನೆ ಮುಂದೆ ಸ್ಥಳೀಯರ ಧರಣಿ ನಡೆಸಿದರು. ಮಹಿಳೆ ಸಾವಿಗೆ ಶಾಸಕರೆ ಕಾರಣ ಎಂದು ಆರೋಪಿಸಿದ್ದಾರೆ.