ಹೊಸಪೇಟೆ: ಪರಿಶಿಷ್ಟ ಜಾತಿಯಲ್ಲಿ ಇದುವರೆಗೂ ನಿಕೃಷ್ಟ ಸ್ಥಿತಿಯಲ್ಲಿರುವವರಿಗೆ ಒಳಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರ ಶಾಸನ ತರಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಆಗ್ರಹಿಸಿದರು.
ತಾಲ್ಲೂಕಿನ ಕೊಂಡನಾಯಕನಹಳ್ಳಿಯಲ್ಲಿ, ಮಾತಂಗ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಹಾಗೂ ಮಾತಂಗ ಆಶ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಒಳಮೀಸಲು ಜಾರಿಗೆ ಸಂಬಂಧಿಸಿದಂತೆ ಈ ಹಿಂದೆ ಕೇಂದ್ರ ಸರ್ಕಾರವು ರಾಜ್ಯದ ಅಭಿಪ್ರಾಯ ಕೇಳಿತ್ತು. ಆಗ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿತ್ತು. ಹಾಗಾಗಿ ಸರ್ಕಾರ ಕಾಯ್ದೆ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
‘ಸದಾಶಿವ ಆಯೋಗದ ವರದಿ ಜಾರಿ ಹೊರತುಪಡಿಸಿದರೆ ಸರ್ಕಾರ ಮಾದಿಗರ ಕಲ್ಯಾಣಕ್ಕೆ ಸಾಕಷ್ಟು ಕೆಲಸ ಮಾಡಿದೆ. ಈ ವಿಷಯ ಇನ್ನೂ ಜೀವಂತವಾಗಿದೆ. ಹಾಗಾಗಿ ವರದಿ ಜಾರಿಗೆ ಆಗ್ರಹಿಸಿ, ಮಾದಿಗರು ಮುಖ್ಯಮಂತ್ರಿ ಅವರಿಗೆ ಕಪ್ಪು ಬಾವುಟ ತೋರಿಸಬಾರದು’ ಎಂದು ಮನವಿ ಮಾಡಿದರು.