ಮೈಸೂರು: ‘ಜೆಡಿಎಸ್ ಪಕ್ಷದ್ದು ಅವಕಾಶವಾದಿ ರಾಜಕಾರಣ. ಈ ಪಕ್ಷದವರು ಬಿಜೆಪಿಗೆ ಬೆಂಬಲ ನೀಡಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಸೋಮವಾರ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ಜೆಡಿಎಸ್ ಈಗ ಜಾತ್ಯತೀತ ಪಕ್ಷವಾಗಿ ಉಳಿದಿಲ್ಲ. ಹಿಂದೆ ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿದ್ದಾರೆ. ಈ ಬಾರಿಯೂ ಆ ಪಕ್ಷದ ಜೊತೆಗೇ ಹೋಗಲಿದ್ದಾರೆ’ ಎಂದರು.
ಬಿಜೆಪಿ ಜೊತೆಗೂಡಿ ಕುಮಾರಸ್ವಾಮಿ ಸರ್ಕಾರ ರಚಿಸಲು ಮುಂದಾದಾಗ ‘ನನ್ನ ಶವದ ಮೇಲೆ ಸರ್ಕಾರ ರಚನೆ ಮಾಡಿ’ ಎಂದು ದೇವೇಗೌಡರು ಹೇಳಿದ್ದರು. ಇಪ್ಪತ್ತು ತಿಂಗಳು ಅಧಿಕಾರ ಅನುಭವಿಸಿದ ಬಳಿಕ ‘ನನ್ನ ಮಗ ಪಕ್ಷ ಉಳಿಸುವ ಕೆಲಸ ಮಾಡಿದ್ದಾನೆ’ ಎಂದರು. ಜೆಡಿಎಸ್ ಪಕ್ಷವು ಬಿಜೆಪಿ ಜೊತೆಗೂಡಿದರೆ ಕಾಂಗ್ರೆಸ್ ಸರ್ವನಾಶವಾಗಿ ಹೋಗುತ್ತದೆ ಎನ್ನುವ ಮೂಲಕ ಮತ್ತೆ ಆ ಪಕ್ಷದ ಜೊತೆ ಕೈಜೋಡಿಸುವ ಸುಳಿವನ್ನು ಕುಮಾರಸ್ವಾಮಿ ನೀಡಿದ್ದಾರೆ. ಹೀಗಾಗಿಯೇ. ಅವರದ್ದು ಅವಕಾಶವಾದಿ ಹಾಗೂ ಕುಟುಂಬ ರಾಜಕಾರಣ ಎಂದು ವಾಗ್ದಾಳಿ ನಡೆಸಿದರು.
**
ಏ.3ರಿಂದ ಮತ್ತೆ ರಾಹುಲ್ ಯಾತ್ರೆ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಏ.3ರಿಂದ ರಾಜ್ಯದಲ್ಲಿ ಜನಾಶೀರ್ವಾದ ಯಾತ್ರೆ ಮುಂದುವರಿಸಲಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಈ ಬಾರಿಯ ಯಾತ್ರೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಬಳಿಕ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನಡೆಯಲಿದೆ. 8ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಯಾತ್ರೆಗೆ ಎಲ್ಲೆಡೆ ಅದ್ಭುತ ಪ್ರತಿಕ್ರಿಯೆ ಲಭಿಸುತ್ತಿದೆ. ನಿರೀಕ್ಷೆಗೂ ಮೀರಿ ಜನ ಸೇರುತ್ತಿದ್ದಾರೆ ಎಂದರು.
**
ಮರಿ ಕುಯ್ಯುತ್ತೀರಾ..?
ಮೈಸೂರಿನಲ್ಲಿ ಸಿದ್ದರಾಮಯ್ಯ ನಿವಾಸದ ಎದುರು ಅಹವಾಲು ಸಲ್ಲಿಸುವ ಸಂದರ್ಭದಲ್ಲಿ ಹಳ್ಳಿಗಳಿಂದ ಬಂದವರು, ಗ್ರಾಮದೇವತೆ ಹಬ್ಬಕ್ಕೆ ಮುಖ್ಯಮಂತ್ರಿಯನ್ನು ಆಹ್ವಾನಿಸಿದರು.
ಆಗ ಸಿದ್ದರಾಮಯ್ಯ, ‘ಹಬ್ಬಕ್ಕೆ ಏನ್ ಮರಿ ಕುಯ್ಯುತ್ತೀರಾ’ ಎಂದು ಪ್ರಶ್ನಿಸಿದರು. ‘ನಾನು ಮೈಸೂರಿನಲ್ಲಿ ಇರಲ್ಲ. ಪುತ್ರ ಯತೀಂದ್ರನನ್ನು ಕಳಿಸುತ್ತೀನಿ ಹೋಗಿ’ ಎಂದರು.