ಹೊನ್ನಾಳಿ: ರೈತ ಕುಟುಂಬಗಳಿಗೆ ಧೈರ್ಯ ಹೇಳುವುದಕ್ಕಾಗಿ ಬಿಜೆಪಿ ಮುಷ್ಟಿ ಅಕ್ಕಿ ಸಂಗ್ರಹ ಅಭಿಯಾನ ನಡೆಸುತ್ತಿದೆ. ಇದರ ಹಿಂದೆ ಪ್ರಚಾರದ ಉದ್ದೇಶವಿಲ್ಲ ಎಂದು ಪಕ್ಷದ ಮುಖಂಡ ಎಂ.ಪಿ. ರೇಣುಕಾಚಾರ್ಯ ಹೇಳಿದರು.ತಾಲ್ಲೂಕಿನ ಮುಕ್ತೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮುಷ್ಟಿ ಅಕ್ಕಿ ಸಂಗ್ರಹಿಸುವ ಸಂದರ್ಭದಲ್ಲಿ ರೈತ ಕುಟುಂಬದವರನ್ನು ಉದ್ದೇಶಿಸಿ ಅವರು ಮಾತನಾಡಿದರು.ರೈತರು ಈ ದೇಶದ ಬೆನ್ನೆಲುಬು. ಅವರ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಶಾಶ್ವತ ಯೋಜನೆ ರೂಪಿಸುವ ಕೆಲಸ ಆಗಬೇಕಾಗಿದೆ. ಭೂಮಿಯನ್ನು ನಂಬಿದ ಅನ್ನದಾತರು ಸುಭಿಕ್ಷವಾಗಿರಬೇಕು. ಆಗ ಮಾತ್ರ ನಾಡಿನ ಅಭಿವೃದ್ಧಿ ಸಾಧ್ಯ ಎಂದರು.
ರೈತರ ಆತ್ಮಹತ್ಯೆಯಂತಹ ಪ್ರಕರಣಗಳು ಪದೇ ಪದೆ ನಡೆಯುತ್ತಿದ್ದರೂ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಅದು ರೈತವಿರೋಧಿ ಧೋರಣೆ ಅನುಸುತ್ತಿದೆ ಎಂದರು.ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೂ ರಾಜ್ಯ ಸರ್ಕಾರ ಯಾವುದೇ ಖರೀದಿ ಕೇಂದ್ರಗಳನ್ನು ತೆರೆದಿಲ್ಲ ಎಂದು ದೂರಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಆರ್. ಮಹೇಶ್, ಬಿಜೆಪಿ ಒಬಿಸಿ ಮೋರ್ಚಾ ತಾಲ್ಲೂಕು ಅಧ್ಯಕ್ಷ ಕನಕದಾಸ, ವಾಲ್ಮೀಕಿ ಸಮಾಜದ ಮುಖಂಡ ಚಂದಪ್ಪ, ಗ್ರಾಮಸ್ಥರು ಹಾಜರಿದ್ದರು.