ಮಂಗಳೂರು: ‘ಪ್ರತಿ ಬಾರಿಯೂ ಚುನಾವಣೆ ಇರುವ ಸಮಯದಲ್ಲೇ ವರ್ಗಾವಣೆ ಆಗುತ್ತಿದ್ದ ಕಾರಣದಿಂದ 32 ವರ್ಷಗಳಿಂದ ಮತದಾನ ಮಾಡಲು ನನಗೆ ಅವಕಾಶ ದೊರೆತಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಎಸ್.ಬೀಳಗಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ‘ಸ್ವೀಪ್’ ಸಮಿತಿಯಿಂದ ಮತದಾರರ ಜಾಗೃತಿಗಾಗಿ ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರಕ್ತದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
‘ಬೆಂಗಳೂರಿನಲ್ಲಿ ಇದ್ದಾಗ ಚುನಾವಣೆ ಸಂದರ್ಭದಲ್ಲಿ ವರ್ಗಾವಣೆ ಆಯಿತು. ಕಲಬುರ್ಗಿಯಲ್ಲಿ ಮತದಾನ ಕೇಂದ್ರಕ್ಕೆ ಹೋದರೆ ಮತದಾರರ ಪಟ್ಟಿಯಲ್ಲಿ ನನ್ನ ಹೆಸರೇ ಇರಲಿಲ್ಲ. 32 ವರ್ಷಗಳಿಂದ ಇದೇ ರೀತಿಯ ಸಮಸ್ಯೆ ಆಯಿತು. ನನ್ನ ಹಕ್ಕನ್ನು ಚಲಾಯಿಸುವ ಅವಕಾಶವೇ ಸಿಗಲಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ಇದು ನನ್ನ ಸೇವಾ ಅವಧಿಯಲ್ಲಿ ನಡೆಯುವ ಕೊನೆಯ ಚುನಾವಣೆ. ಈ ಬಾರಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಕೋರಿಕೆ ಸಲ್ಲಿಸಿದ್ದೇನೆ. ಸೇವಾ ಅವಧಿಯ ಮೊದಲ ಮತದಾನಕ್ಕೆ ಕಾತರದಿಂದ ಕಾಯುತ್ತಿದ್ದೇನೆ’ ಎಂದು ಅವರು ಹೇಳಿದರು.