ಬೆಂಗಳೂರು: ರಾಜ್ಯ ವಕೀಲರ ಪರಿಷತ್ಗೆ ಕಳೆದ ತಿಂಗಳು ನಡೆದ ಚುನಾವಣೆಯ ಮತ ಎಣಿಕೆಗೆ ನೀಡಿದ್ದ ತಡೆಯಾಜ್ಞೆ ಆದೇಶವನ್ನು ದೆಹಲಿಯಲ್ಲಿರುವ ಭಾರತೀಯ ವಕೀಲರ ಪರಿಷತ್ ಚುನಾವಣಾ ನ್ಯಾಯಮಂಡಳಿ ಮುಂದುವರಿಸಿದೆ.
ಈ ಕುರಿತಂತೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿರುವ ವಕೀಲ ದುರ್ಗಾಪ್ರಸಾದ್ ಹಾಗೂ ಎಚ್.ಸಿ.ಶಿವರಾಮು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನಿವೃತ್ತ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯೂ ಆದ ನ್ಯಾಯಮಂಡಳಿ ಅಧ್ಯಕ್ಷ ಎಸ್.ಕೆ.ಮುಖರ್ಜಿ ತಡೆ ಮುಂದುವರಿಸಿ ಆದೇಶಿಸಿದರು.
ಪ್ರಕರಣದ ಅಂತಿಮ ಆದೇಶ ಹೊರಡಿಸುವವರೆಗೂ ತಡೆಯಾಜ್ಞೆ ಜಾರಿಯಲ್ಲಿ ಇರುತ್ತದೆ ಎಂದು ನ್ಯಾಯಮಂಡಳಿ ಹೇಳಿದೆ.
ಚುನಾವಣಾ ಅಧಿಕಾರಿಯಾಗಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಜಿ.ಶಿವಣ್ಣ ಆಕ್ಷೇಪಣೆ ಅರ್ಜಿ ಸಲ್ಲಿಸಿದರು.
ಸಮಯ ಕಡಿಮೆ ಇದ್ದುದರಿಂದ ಹೈಕೋರ್ಟ್ ನ್ಯಾಯಮೂರ್ತಿಯನ್ನು ವೀಕ್ಷಕರನ್ನಾಗಿ ಮಾಡಲು ಸಾಧ್ಯವಾಗಲಿಲ್ಲ ಎಂದು ನ್ಯಾಯ ಮಂಡಳಿಗೆ ತಿಳಿಸಿದರು.
‘25 ಪದಾಧಿಕಾರಿಗಳ ಸ್ಥಾನಕ್ಕೆ ನಡೆದಿರುವ ಚುನಾವಣೆಯಲ್ಲಿ ರಾಜ್ಯದ 198 ವಕೀಲರ ಸಂಘಗಳ ಸದಸ್ಯರು (ಸಿಒಪಿ ಹೊಂದಿದ) ಮತ ಚಲಾಯಿಸಿದ್ದಾರೆ. ಈ ಚುನಾವಣೆಗೆ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ವೀಕ್ಷಕರನ್ನಾಗಿ ಮಾಡಬೇಕಿತ್ತು. ಆದರೆ, ಮಾಡಿಲ್ಲ ಹಾಗೂ ಅಕ್ರಮ ನಡೆದಿದೆ’ ಎಂಬುದು ಅರ್ಜಿದಾರರ ತಕರಾರು.