ಬೆಂಗಳೂರು: ಯಶವಂತಪುರ ವಿದಾನಸಬಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಟಿ.ಎನ್.ಜವರಾಯಿಗೌಡ ಬಿರುಸಿನ ಪ್ರಚಾರ ನಡೆಸಿದರು.
‘ರಾಜ್ಯದಲ್ಲಿ ಕುಮಾರಪರ್ವದ ಪ್ರಭಾವ ಜೋರಾಗಿದೆ. ಈ ಬಾರಿ ಕುಮಾರಸ್ವಾಮಿ ಅವರಿಗೆ ಅವಕಾಶ ನೀಡೋಣ ಎಂದು ಜನ ತೀರ್ಮಾನಿಸಿದ್ದು, ಎಲ್ಲೆಡೆ ಜೆಡಿಎಸ್ಗೆ ಬೆಂಬಲ ವ್ಯಕ್ತವಾಗುತ್ತಿದೆ’ ಎಂದು ಅವರು ತಿಳಿಸಿದರು.
‘ಕುಮಾರಸ್ವಾಮಿ ಆದೇಶದಂತೆ ಕ್ಷೇತ್ರದ ಪ್ರತಿ ಬಡಾವಣೆ, ಗ್ರಾಮಗಳ ಮನೆಮನೆಗೂ ತೆರಳಿ ಜೆಡಿಎಸ್ಗೆ ಆಶೀರ್ವದಿಸುವಂತೆ ಮನವಿ ಮಾಡಲಾಗುತ್ತಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಕಸದ ಸಮಸ್ಯೆ ಸೇರಿ ಮೂಲಸೌಕರ್ಯಗಳ ಕೊರತೆಗಳಿವೆ. ಹಕ್ಕುಪತ್ರಗಳಿಲ್ಲದೆ, ನಾಗರೀಕರು ಅಲೆದಾಡುತ್ತಿದ್ದಾರೆ’ ಎಂದು ಹೇಳಿದರು.
‘ಜೆಡಿಎಸ್ ಅಧಿಕಾರಕ್ಕೆ ಬಂದ ಅಲ್ಪ ಅವಧಿಯಲ್ಲಿ ಸಮಸ್ಯೆಗಳ ಶಮನಕ್ಕೆ ಕ್ರಮ ಕೈಗೊಳ್ಳಲಾಗುವುದು. ಜನರನ್ನು ಸತಾಯಿಸುವ ಅಧಿಕಾರಿಗಳಿಗೆ ಕಾನೂನಿನ ಮೂಲಕ ತಕ್ಕ ಪಾಠ ಕಲಿಸುತ್ತೇವೆ’ ಎಂದು ತಿಳಿಸಿದರು.
ಕೆಂಗೇರಿ ಹೋಬಳಿ ಜೆಡಿಎಸ್ ಅಧ್ಯಕ್ಷ ಕೇಶವಮೂರ್ತಿ, ಜಿಲ್ಲಾ ಪಂಚಾಯತಿ ಸದಸ್ಯ ನರಸಿಂಹಮೂರ್ತಿ, ಹೇಮಂತರಾಜ ಅರಸ್, ಶ್ರೀನಿವಾಸರೆಡ್ಡಿ, ಚಂದ್ರಪ್ಪ, ಪುಟ್ಟಸ್ವಾಮಿಗೌಡ, ನಂದೀಶ್ ಸೇರಿ 50ಕ್ಕೂ ಹೆಚ್ಚು ಕಾರ್ಯಕರ್ತರು ಜೆಡಿಎಸ್ಗೆ ಸೇರ್ಪಡೆಗೊಂಡರು.