ರತ್ಲಂ ಬಳಿ ಗೂಡ್ಸ್ ರೈಲುಗಳ ಡಿಕ್ಕಿ: ಹನ್ನೆರಡು ಸಾವು 28 ವಾಗೀನು ನಾಶ; ಅಸಂಖ್ಯ ದನಕರು ಆಹುತಿ
ಮುಂಬೈ, ಏ. 18– ಅನಾಸ್ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಎರಡು ಗೂಡ್ಸ್ ರೈಲುಗಳು ಡಿಕ್ಕಿ ಹೊಡೆದಾಗ ಹನ್ನೆರಡು ಮಂದಿ ಸತ್ತು, ಆರು ಜನಕ್ಕೆ ಗಾಯವಾಯಿತೆಂದು ಅಧಿಕೃತ ವರದಿಗಳು ತಿಳಿಸಿವೆ.
ಪಶ್ಚಿಮ ರೈಲ್ವೆಯ ಗೋಧ್ರಾ– ರತ್ಲಂ ವಿಭಾಗದಲ್ಲಿ ಇಲ್ಲಿಂದ 566 ಕಿಲೋಮೀಟರ್ ದೂರದಲ್ಲಿ ಅನಾಸ್ ನಿಲ್ದಾಣವಿದೆ. ಅನಾಸ್ ರತ್ಲಂಗೆ 91 ಕಿಲೋಮೀಟರ್ ದೂರದಲ್ಲಿದೆ.
ಚವಾಣ್ ಹೇಳಿಕೆ ನೀಡದಿರುವುದರ ಬಗ್ಗೆ ಆಕ್ಷೇಪಣೆ
ನವದೆಹಲಿ, ಏ. 18– ಅಲಹಾಬಾದಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಗೃಹ ಸಚಿವ ವೈ.ಬಿ. ಚಾವಣರು ತಾವಾಗಿಯೇ ಹೇಳಿಕೆ ನೀಡದೆ ಕರ್ತವ್ಯಚ್ಯುತರಾಗಿದ್ದಾರೆ ಎಂದು ಲೋಕಸಭೆಯಲ್ಲಿ ಕುಪಿತ ವಿರೋಧಿ ಸದಸ್ಯರು ಆಪಾದಿಸಿದರು.
ಗಮನಸೆಳೆಯುವ ಸೂಚನೆ ಬಗ್ಗೆ ಹೇಳಿಕೆ ನೀಡಬೇಕೆಂದು ಎಸ್.ಎಂ. ಬ್ಯಾನರ್ಜಿ, ಇಂದ್ರಜಿತ್ ಗುಪ್ತ, ಜ್ಯೋತಿರ್ಮಯ ಬಸು ಮತ್ತು ಜಾರ್ಜ್ ಫರ್ನಾಂಡೀಸ್ ಒತ್ತಾಯಪಡಿಸಿದರು.
ಶೀಘ್ರವೇ ಗೋಲ್ಡ್ಬರ್ಗ್ ರಾಜೀನಾಮೆ
ವಾಷಿಂಗ್ಟನ್, ಏ. 18– ವಿಶ್ವಸಂಸ್ಥೆಯಲ್ಲಿ ಅಮೆರಿಕದ ಖಾಯಂ ಪ್ರತಿನಿಧಿಯಾಗಿರುವ ಅರ್ಥರ್ ಗೋಲ್ಡ್ಬರ್ಗ್ ಅವರು ಅತಿ ಶೀಘ್ರದಲ್ಲೇ ರಾಜೀನಾಮೆ ಕೊಡುವುದನ್ನು ಇಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿತು.
ಅಧ್ಯಕ್ಷ ಜಾನ್ಸನ್ ಅವರು ಹಾನಾಯ್ನಿಂದ ಹಿಂತಿರುಗಿದ ಕೂಡಲೇ ಗೋಲ್ಡ್ಬರ್ಗ್ ಅವರ ರಾಜೀನಾಮೆ ಪ್ರಕಟಿಸುವ ಉದ್ದೇಶ ಹೊಂದಿರುವರೆಂದೂ ಪತ್ರಿಕೆ ಪ್ರಕಟಿಸಿದೆ.
ಕಿಂಗ್ ಕೊಲೆ: ಎರಿಕ್ ಗಾಲ್ವ್ ಬಂಧನಕ್ಕೆ ವಾರೆಂಟ್
ಬರ್ಮಿಂಗ್ಹಾಮ್, ಏ. 18– ಏರಿಕ್ ಸ್ಟಾರ್ವೊಗಾಲ್ಪ್ ಎಂಬಾತ ನಾಗರಿಕ ಹಕ್ಕು ಹೋರಾಟದ ನಾಯಕ ಡಾ. ಮಾರ್ಟಿನ್ ಲೂಥರ್ ಕಿಂಗ್ ಕೊಲೆಯ ಸಂಚು ನಡೆಸಿದನೆಂದು ಎಫ್ಬಿಐ ಆಪಾದಿಸಿದೆ.
ಬರ್ಮಿಂಗ್ಹಾಮ್ ಎಫ್ಬಿಐ ಕಚೇರಿಯ ಜೋ ಗ್ಯಾಂಬರ್ ನಿನ್ನೆ ದೂರನ್ನು ಇತ್ತರು.
ರೈಲ್ವೆ ನೌಕರರ ವೇತನ ಮಂಡಲಿ ಸದ್ಯಕ್ಕೆ ಅಸಂಭವ
ನವದೆಹಲಿ, ಏ. 18– ರಾಷ್ಟ್ರೀಯ ಕಾರ್ಮಿಕ ಆಯೋಗ ಶಿಫಾರಸುಗಳು ಸರಕಾರಕ್ಕೆ ತಲುಪಿದ ನಂತರ ಮಾತ್ರವೇ ರೈಲ್ವೆ ನೌಕರರಿಗಾಗಿ ಪ್ರತ್ಯೇಕ ವೇತನ ಮಂಡಲಿಯೊಂದರ ರಚನೆ ವಿಚಾರ ಪರಿಶೀಲಿಸುವುದಾಗಿ ಕಾರ್ಮಿಕ ಸಚಿವ ಶ್ರೀ ಜೆ.ಎಲ್. ಹಾಥಿ ಇಂದು ಲೋಕಸಭೆಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.