ಪಟ್ನಾ: ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿರುವ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರು ಬಿಜೆಪಿ ತೊರೆಯುವುದಾಗಿ ಘೋಷಿಸಿದ್ದಾರೆ.
‘ಬಿಜೆಪಿ ಜತೆ ಸುದೀರ್ಘ ಒಡನಾಟ ಇಟ್ಟುಕೊಂಡಿದ್ದೆ. ಅದರ ಜತೆಗಿನ ಸಂಪರ್ಕವನ್ನು ಇಂದು(ಶನಿವಾರ) ಕಳೆದುಕೊಳ್ಳುತ್ತಿದ್ದೇನೆ. ನಾಲ್ಕು ವರ್ಷಗಳಿಂದ ಚುನಾವಣಾ ರಾಜಕೀಯ ಬಿಟ್ಟಿದ್ದೆ. ಈಗ ಪಕ್ಷ ರಾಜಕಾರಣದಿಂದ ಸನ್ಯಾಸ ಸ್ವೀಕರಿಸುತ್ತಿದ್ದೇನೆ. ಯಾವುದೇ ಪಕ್ಷವನ್ನೂ ಸೇರುವುದಿಲ್ಲ’ ಎಂದು ಇಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ಮಂಚ್’ನ ಮೊದಲ ಸಭೆಯಲ್ಲಿ ತಿಳಿಸಿದ್ದಾರೆ.
ಈ ಸಭೆಯಲ್ಲಿ ಬಿಜೆಪಿ ನಾಯಕ, ಪಟ್ನಾ ಸಾಹಿಬ್ ಕ್ಷೇತ್ರದ ಸಂಸದ ಶತ್ರುಘ್ನ ಸಿನ್ಹಾ, ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ, ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ತೃಣಮೂಲ ಕಾಂಗ್ರೆಸ್ನ ದಿನೇಶ್ ದ್ವಿವೇದಿ, ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಭಾಗವಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆಡಳಿತದಿಂದ ಅಸಮಾಧಾನಗೊಂಡಿರುವ ಸಿನ್ಹಾ, ಪ್ರಸ್ತುತ ಸರ್ಕಾರದ ಆಡಳಿತದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಟ ನಡೆಸುವೆ. ಇದರ ಮೊದಲ ಹೆಜ್ಜೆಯಾಗಿ ಎಲ್ಲ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಿ, ‘ಪ್ರಜಾಪ್ರಭುತ್ವ ಉಳಿಸಿ’ ಎಂಬ ಚಳವಳಿ ರೂಪಿಸುವುದಾಗಿ ತಿಳಿಸಿದ್ದಾರೆ.
ಇದೇ ಜನವರಿ 30ರಂದು ಯಶವಂತ ಸಿನ್ಹಾ ‘ರಾಷ್ಟ್ರೀಯ ಮಂಚ್’ ರಾಜಕೀಯೇತರ ವೇದಿಕೆ ಸ್ಥಾಪಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದ ಅವಧಿಯಲ್ಲಿ ಸಿನ್ಹಾ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾಗಿದ್ದರು.
ಯಶವಂತ್ ಸಿನ್ಹಾ ಮಗ ಜಯಂತ್ ಸಿನ್ಹಾ ಅವರು, ಮೋದಿ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವರಾಗಿದ್ದಾರೆ.