ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಮಂಗಳವಾರ ರಾತ್ರಿ ವಿವಿಧೆಡೆ ಧಾರಾಕಾರ ಮಳೆ ಸುರಿಯಿತು.
ಗೋಣಿಕೊಪ್ಪಲು ಭಾಗದಲ್ಲಿ ಸಂಜೆ ಉತ್ತಮ ಮಳೆ ಸುರಿಯಿತು. ಹೀಗಾಗಿ, ಕೊನೆಕ್ಷಣದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಹಿರಂಗ ಪ್ರಚಾರ ಸಭೆ ರದ್ದುಗೊಳಿಸಲಾಯಿತು. ಕುಮಟಾದಲ್ಲಿ ಪ್ರಚಾರ ಮುಗಿಸಿ ಕೊಡಗಿಗೆ ಆದಿತ್ಯನಾಥ್ ಬರಬೇಕಿತ್ತು.
ಕುಶಾಲನಗರ, ಸೋಮವಾರಪೇಟೆ, ನಾಪೋಕ್ಲು, ಭಾಗಮಂಡಲ, ತಲಕಾವೇರಿ, ಮಡಿಕೇರಿ, ಉಡೋತ್, ಬೆಟ್ಟಗೇರಿ, ಮಾದಾಪುರ, ಆವಂದೂರು, ವಿರಾಜಪೇಟೆಯಲ್ಲಿ ರಾತ್ರಿ ಭಾರಿ ಮಳೆಯಾಗಿದೆ. ಗಾಳಿಗೆ ಅಲ್ಲಲ್ಲಿ ಮರಗಳು ಧರೆಗೆ ಉರುಳಿವೆ.
ದಾವಣಗೆರೆ ಜಿಲ್ಲೆಯಲ್ಲಿ ಮಂಗಳವಾರ ಕೆಲ ಕಾಲ ಗುಡುಗುಸಹಿತ ಮಳೆಯಾಯಿತು. ದಾವಣಗೆರೆ ನಗರ, ಚನ್ನಗಿರಿ, ನ್ಯಾಮತಿ, ಹರಪನಹಳ್ಳಿ, ಕುಂಬಳೂರು, ಮಲೇಬೆನ್ನೂರು, ಉಚ್ಚಂಗಿದುರ್ಗ ಸೇರಿ ಹಲವೆಡೆ ಮಳೆ ಸುರಿದು ತಂಪು ಹವೆ ಉಂಟಾಯಿತು. ಕೆಲವೆಡೆ ಗುಡುಗು–ಮಿಂಚಿನ ಆರ್ಭಟ ಜೋರಾಗಿತ್ತು.
ಮಲೇಬೆನ್ನೂರಿನಲ್ಲಿ ಆಲಿಕಲ್ಲು ಮಳೆ ಸುರಿಯಿತು. ಮಲೆಬೆನ್ನೂರಿನ ಬಳಿ ರಸ್ತೆಗೆ ಮರಗಳು ಉರುಳಿಬಿದ್ದಿದ್ದರಿಂದ ಒಂದೂವರೆ ಗಂಟೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.
ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ಭಾನುವಾರ ಬೀಸಿದ ಗಾಳಿಯಿಂದ ಅಡಿಕೆ ಹಾಗೂ ಬಾಳೆ ತೋಟಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ.