ಬೆಂಗಳೂರು: ರಾಜಾಜಿನಗರದ 14ನೇ ಮುಖ್ಯರಸ್ತೆಯಲ್ಲಿರುವ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಎಸ್.ಎಸ್. ನಾಯಕ್ ಅವರ ಕಚೇರಿಯಲ್ಲಿ ಹಣ ಪತ್ತೆಯಾದ ಪ್ರಕರಣ ಸಂಬಂಧ ಸಿವಿಲ್ ಎಂಜಿನಿಯರ್ ಮಹೇಶ್ (25) ಎಂಬುವರನ್ನು ಬಂಧಿಸಿ, ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ.
ನಾಯಕ್ ಅವರ ‘ಎಸ್ಡಿಎಂ ಸಮೃದ್ಧಿ ಕನ್ಸ್ಟ್ರಕ್ಷನ್’ ಕಚೇರಿಯಲ್ಲಿ ಉಡುಪಿಯ ಮಹೇಶ್ ಕೆಲಸ ಮಾಡುತ್ತಿದ್ದರು.
ಚುನಾವಣಾಧಿಕಾರಿಗಳು ಬುಧವಾರ ಕಚೇರಿ ಮೇಲೆ ದಾಳಿ ನಡೆಸಿದ ವೇಳೆ ಹಣದ ಬ್ಯಾಗ್ ಸಮೇತ ಅವರು ಸಿಕ್ಕಿಬಿದ್ದಿದ್ದರು ಎಂದು ರಾಜಾಜಿನಗರ ಪೊಲೀಸರು ತಿಳಿಸಿದರು.
‘ಚುನಾವಣಾ ಅಧಿಕಾರಿ ಮಹೇಶ್ವರಪ್ಪ ದಾಳಿ ಸಂಬಂಧ ಮೂರು ಪ್ರತ್ಯೇಕ ದೂರು ನೀಡಿದ್ದಾರೆ. ₹5.87 ಲಕ್ಷ ಜಪ್ತಿ ಮಾಡಿರುವುದಾಗಿ ಅವರು ಹೇಳಿದ್ದಾರೆ’ ಎಂದರು.
‘ಕಂಪನಿ ವತಿಯಿಂದ ನಗರದಲ್ಲಿ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿದೆ. ಅದಕ್ಕೆ ಸಂಬಂಧಪಟ್ಟ ಹಣ ನನ್ನ ಕಡೆ ಇತ್ತು. ಅದನ್ನೇ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ’ ಎಂದು ಮಹೇಶ್ ಹೇಳುತ್ತಿದ್ದಾರೆ. ಆದರೆ, ಆ ಹಣಕ್ಕೆ ಇದುವರೆಗೂ ಯಾವುದೇ ದಾಖಲೆ ನೀಡಿಲ್ಲ. ಹೀಗಾಗಿ ಹಣದ ಮೂಲದ ಬಗ್ಗೆ ಅನುಮಾನಗಳಿವೆ’ ಎಂದರು.
‘ಕಚೇರಿಯ ಲಾಕರ್ನಲ್ಲೂ ಹಣವಿತ್ತು. ಅದನ್ನು ತೆರೆಯಲು ಕಚೇರಿಯ ನೌಕರರು ಆರಂಭದಲ್ಲಿ ನಿರಾಕರಿಸಿದ್ದರು.
ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ ಬಳಿಕ ಲಾಕರ್ ತೆರೆದರು. ಅದರಲ್ಲೂ ಹಣ ಸಿಕ್ಕಿತು’ ಎಂದೂ ಪೊಲೀಸರು ತಿಳಿಸಿದರು.
ಇಬ್ಬರ ಹೆಸರು ಮಾತ್ರ ಉಲ್ಲೇಖ: ‘ನಾಯರ್ ಹಾಗೂ ಮಹೇಶ್ ಹೆಸರನ್ನು ಮಾತ್ರ ಚುನಾವಣಾಧಿಕಾರಿಗಳು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದೂ ಪೊಲೀಸರು ಹೇಳಿದರು.