ಬೆಂಗಳೂರು: ರಾಜ್ಯದ 27 ಮತಗಟ್ಟೆಗಳಲ್ಲಿ ‘ಅಣಕು ಮತದಾನ’ದ ಬಳಿಕ ವಿವಿಪ್ಯಾಟ್ಗಳಿಂದ ಆ ಮತಗಳನ್ನು ಅಳಿಸಿಹಾಕದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಎಲ್ಲೆಲ್ಲಿ ಇಂತಹ ಲೋಪವಾಗಿದೆಯೋ ಅಲ್ಲಿ, ನೈಜ ಮತದಾನದ ವೇಳೆ ವಿವಿಪ್ಯಾಟ್ಗಳಲ್ಲಿ ಮುದ್ರಿತವಾದ ಸ್ಲಿಪ್ಗಳನ್ನು ಬಳಸಿ ಮತ ಎಣಿಕೆ ನಡೆಸುವುದು ಕಡ್ಡಾಯ ಎಂದು ಆಯೋಗ ಸ್ಪಷ್ಟ ಸೂಚನೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸ್ಪರ್ಧಿಸಿರುವ ವರುಣಾ ಕ್ಷೇತ್ರದ ಮತಗಟ್ಟೆ (17ಎ) ಸೇರಿದಂತೆ 21 ಕ್ಷೇತ್ರಗಳಲ್ಲಿ ಇಂತಹ ಲೋಪ ಆಗಿದೆ. ಯಲಹಂಕ ಕ್ಷೇತ್ರದ ನಾಲ್ಕು ಮತಗಟ್ಟೆಗಳಲ್ಲಿ (100, 177, 230 ಹಾಗೂ 265) ಸಿಬ್ಬಂದಿ ಇಂತಹ ತಪ್ಪು ಎಸಗಿದ್ದಾರೆ.
ಯಂತ್ರಗಳ ಬದಲಾವಣೆ: ‘ಅಣಕು ಮತದಾನದ ವೇಳೆ 235 ಬ್ಯಾಲೆಟ್ ಯೂನಿಟ್, 357 ಕಂಟ್ರೋಲ್ ಯೂನಿಟ್ ಹಾಗೂ 786 ವಿವಿ ಪ್ಯಾಟ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ತಕ್ಷಣ ಅವುಗಳನ್ನು ಬದಲಾಯಿಸಿದ್ದೆವು’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ಕುಮಾರ್ ಹೇಳಿದ್ದಾರೆ.