ಹೈದರಾಬಾದ್: ಬಿಜೆಪಿ ಸೇರ್ಪಡೆಗೊಂಡಿದ್ದ ಕಾಂಗ್ರೆಸ್ನ ಮಾಜಿ ಸಚಿವ ಕನ್ನಾ ಲಕ್ಷ್ಮೀನಾರಾಯಣ ಅವರನ್ನು ಆಂಧ್ರ ಪ್ರದೇಶ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದ್ದು, ಇದರಿಂದ ಬಿಜೆಪಿಯ ಒಂದು ವರ್ಗದ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೆಂದು ಬಿಂಬಿತರಾಗಿದ್ದ ಸೋಮು ವೀರಾಜು ಅವರನ್ನು, ಚುನಾವಣೆ ನಿರ್ವಹಣಾ ಸಮಿತಿಯ ಸಂಚಾಲಕರನ್ನಾಗಿ ನೇಮಿಸಲಾಗಿದೆ. ವೀರಾಜು ಅವರೇ ಅಧ್ಯಕ್ಷರಾಗಬಹುದು ಎಂಬ ಸುದ್ದಿ ಬಲವಾಗಿ ಕೇಳಿ ಬಂದಿತ್ತು. ಅಧ್ಯಕ್ಷರನ್ನಾಗಿ ಮಾಡದೆ ಇರುವುದರಿಂದ ಅವರು ಆಕ್ರೋಶಗೊಂಡಿದ್ದಾರೆ.
ಪಕ್ಷದ ನಿರ್ಣಯವನ್ನು ರಾಜಮಹೇಂದ್ರಿ ನಗರ ಘಟಕದ ಬಿಜೆಪಿ ಅಧ್ಯಕ್ಷ ಬೊಮ್ಮುಲ ದತ್ತು ವಿರೋಧಿಸಿದ್ದು, ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವೀರ್ರಾಜು ಅವರಿಗೆ ಸ್ಥಾನ ನೀಡದಿದ್ದರೆ ಪೂರ್ವ ಮತ್ತು ಗೋದಾವರಿ ಜಿಲ್ಲೆಗಳ ಹಲವು ಬಿಜೆಪಿ ಮುಖಂಡರು ಸಹ ರಾಜೀನಾಮೆ ನೀಡಲಿದ್ದಾರೆ ಎಂದು ದತ್ತು ಹೇಳಿದ್ದಾರೆ.
ಕಮ್ಮ ಸಮುದಾಯದವರಿಗೆ ಹೆಚ್ಚು ಪ್ರಾತಿನಿಧ್ಯ ನೀಡಿರುವ ಟಿಡಿಪಿ ಹಾಗೂ ರೆಡ್ಡಿ ಸಮುದಾಯದವರು ಹೆಚ್ಚಾಗಿರುವ ವೈಎಸ್ಆರ್ ಕಾಂಗ್ರೆಸ್ನಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳುವ ಸಲುವಾಗಿ ಕಾಪು ಸಮುದಾಯದ ಪ್ರಬಲ ನಾಯಕರಾಗಿರುವ ಕನ್ನಾ ಅವರನ್ನು ಬಿಜೆಪಿ ಆಯ್ಕೆ ಮಾಡಿಕೊಂಡಿದೆ.