ಬೆಂಗಳೂರು: ಅನುಕಂಪದ ಅಲೆಯಲ್ಲೇ ಚುನಾವಣೆ ಮುನ್ನೆಲೆಗೆ ಬಂದಿದ್ದ ಅಭ್ಯರ್ಥಿಗಳ ಪೈಕಿ, ಕಾಂಗ್ರೆಸ್ನ ಇಬ್ಬರು ಮಾತ್ರ ಗೆಲುವಿನ ನಗೆ ಬೀರಿದ್ದಾರೆ.
ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕ ಖಮರುಲ್ ಇಸ್ಲಾಂ ಹೃದಯಾಘಾತದಿಂದ ಮೃತಪಟ್ಟಿದ್ದರಿಂದ, ಆ ಕ್ಷೇತ್ರದಲ್ಲಿ ಅವರ ಪತ್ನಿ ಕನ್ನೀಜ್ ಫಾತಿಮಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. 5,940 ಮತಗಳ ಅಂತರದಿಂದ ಗೆಲವು ಸಾಧಿಸಿದ ಫಾತಿಮಾ, ಕ್ಷೇತ್ರವನ್ನು ಪಕ್ಷದ ತೆಕ್ಕೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಜೆಡಿಎಸ್ ಶಾಸಕ ಚಿಕ್ಕಮಾದು ಅವರ ಮಗ ಅನಿಲ್, ಎಚ್.ಡಿ.ಕೋಟೆ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ವಿಜಯ ಪತಾಕೆ ಹಾರಿಸಿದ್ದಾರೆ.
ಬೇಲೂರಿನ ಮಾಜಿ ಶಾಸಕ ವೈ.ಎನ್.ರುದ್ರೇಶ್ ಗೌಡ, ಇದೇ ಮಾರ್ಚ್ನಲ್ಲಿ ನಿಧನರಾದರು. ಈ ಸಾವಿನ ಅನುಕಂಪದ ಅಲೆಯ ಲಾಭ ಪಡೆಯಲು ಕಾಂಗ್ರೆಸ್, ಅವರ ಪತ್ನಿ ಎಂ.ಎನ್.ಕೀರ್ತನಾ ಅವರನ್ನು ಕಣಕ್ಕಿಳಿಸಿತ್ತು. ಆದರೆ, ಅಲ್ಲಿ ಜನತಾದಳದ ಕೆ.ಎಸ್.ಲಿಂಗೇಶ ಕಾಂಗ್ರೆಸ್ನ ಯೋಚನೆ
ಯನ್ನು ಬುಡಮೇಲು ಮಾಡಿದರು.
ದರ್ಶನ್ಗೆ ಸೋಲು: ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ನಿಧನದ ನಂತರ, ‘ಸ್ವರಾಜ್ ಇಂಡಿಯಾ’ ಪಕ್ಷದ ಉತ್ತರಾಧಿಕಾರಿಯಾಗಿ ಅವರ ಮಗ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದಿಂದ ಕಣಕ್ಕಿಳಿದಿದ್ದರು.
ಪದವೀಧರರು. ಹೊರದೇಶ ಸುತ್ತಿ ಬಂದವರು. ರೈತಪರ ಕಾಳಜಿ ಉಳ್ಳವರು. ಮೇಲಾಗಿ, ಪುಟ್ಟಣ್ಣಯ್ಯ ಅವರ ಮಗ ಎಂಬ ಕಾರಣಕ್ಕೆ ಸಕ್ಕರೆ ನಾಡಿನಲ್ಲಿ ಅನುಕಂಪದ ಅಲೆ ಎದ್ದಿತ್ತು. ಅವರ ಪರವಾಗಿ ತಮಿಳುನಾಡಿನ ರೈತರು ಸಹ ಪ್ರಚಾರ ಮಾಡಿ, ಕ್ಷೇತ್ರದಲ್ಲಿ ಬದಲಾವಣೆ ತರುವ ಸೂಚನೆ ನೀಡಿದ್ದರು.
ಇದೇ ಅಲೆಯಲ್ಲಿ ಜೆಡಿಎಸ್ನ ಸಿ.ಎಸ್.ಪುಟ್ಟರಾಜು ಅವರಿಗೆ ತೀವ್ರ ಪೈಪೋಟಿ ನೀಡಿದ್ದ ದರ್ಶನ್, ಕೊನೆಗೆ 22,224 ಮತಗಳ ಅಂತರದಿಂದ ಸೋಲನ್ನು ಒಪ್ಪಿಕೊಂಡಿದ್ದಾರೆ.