ಬೆಂಗಳೂರು: ‘₹2 ಲಕ್ಷ ಕೊಡದಿದ್ದರೆ ನಿನ್ನ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತೇನೆ’ ಎಂದು ವೈದ್ಯಕೀಯ ವಿದ್ಯಾರ್ಥಿನಿಗೆ ಬ್ಲ್ಯಾಕ್ಮೇಲ್ ಮಾಡು
ತ್ತಿದ್ದ ಆರೋಪದಡಿ ರಾಘವೇಂದ್ರ ಸಿಂಗ್ (19) ಎಂಬಾತನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿನಿಯ ಸ್ನೇಹಿತನ ಗಮನ ಬೇರೆಡೆ ಸೆಳೆದಿದ್ದ ಆರೋಪಿ, ಮೇ 6ರಂದು ಅವರ ಮೊಬೈಲ್ ಕದ್ದಿದ್ದ. ಆ ಬಗ್ಗೆ ಸ್ನೇಹಿತ, ಇ– ಲಾಸ್ಟ್ ಆ್ಯಪ್ನಲ್ಲಿ ದೂರು ನೀಡಿದ್ದರು.
ಸ್ನೇಹಿತ ಹಾಗೂ ಯುವತಿ ಸೇರಿ ತೆಗೆಸಿಕೊಂಡಿದ್ದ ಫೋಟೊಗಳು ಮೊಬೈಲ್ನಲ್ಲಿದ್ದವು. ಅವುಗಳನ್ನು ನೋಡಿದ್ದ ಆರೋಪಿ, ಫೇಸ್ಬುಕ್ನಲ್ಲಿ ನಕಲಿ ಖಾತೆಯನ್ನು ತೆರೆದು ಯುವತಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಅದನ್ನು ಅವರು ತಿರಸ್ಕರಿಸಿದ್ದರು.
ಅದಾದ ನಂತರ, ಕದ್ದ ಮೊಬೈಲ್ನಿಂದಲೇ ಯುವತಿಗೆ ಸಂದೇಶ ಕಳುಹಿಸಲಾರಂಭಿಸಿದ್ದ. ಆತನ ಸಂದೇಶಗಳ ಬಗ್ಗೆ ಅನುಮಾನಗೊಂಡ ಯುವತಿ, ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಅವಾಗಲೇ ಆರೋಪಿ, ಖಾಸಗಿ ಫೋಟೊಗಳನ್ನು ವಾಟ್ಸ್ಆ್ಯಪ್ಗೆ ಕಳುಹಿಸಲಾರಂಭಿಸಿದ್ದ ಎಂದು ಪೊಲೀಸರು ತಿಳಿಸಿದರು.
ಫೋಟೊ ನೋಡಿ ಗಾಬರಿಗೊಂಡ ಯುವತಿ, ಪ್ರತಿಕ್ರಿಯೆ ನೀಡಲಾರಂಭಿಸಿದ್ದರು. ಅವಾಗಲೇ ಆರೋಪಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ‘ಅಷ್ಟು ದುಡ್ಡಿಲ್ಲ’ ಎಂದಿದ್ದ ಯುವತಿ, ₹20 ಸಾವಿರ ಕೊಡುವುದಾಗಿ ಒಪ್ಪಿಕೊಂಡಿದ್ದರು ಎಂದರು.
ದೂರು ದಾಖಲಾಗುತ್ತಿದ್ದಂತೆಯೇ ಯುವತಿಯಿಂದಲೇ ಕರೆ ಮಾಡಿಸಿ ಆರೋಪಿಯನ್ನು ರಾಜರಾಜೇಶ್ವರಿ ನಗರದ ಕಾಲೇಜೊಂದಕ್ಕೆ ಕರೆಸಿಕೊಂಡಿದ್ದೆವು. ಅಲ್ಲಿಯೇ ಸುತ್ತುವರಿದು ಆತನನ್ನು ಬಂಧಿಸಿದೆವು ಎಂದು ಪೊಲೀಸರು ಹೇಳಿದರು.
* ‘ತಂಗಿಗೆ ಶಿಕ್ಷಣ ಕೊಡಿಸಲು ಕೃತ್ಯ’
‘ನನ್ನ ತಂಗಿ ದ್ವಿತೀಯ ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಳು. ಆಕೆಗೆ ಒಳ್ಳೆಯ ಕಾಲೇಜಿನಲ್ಲಿ ಸೀಟು ಕೊಡಿಸಲು ₹ 60 ಸಾವಿರ ಬೇಕಿತ್ತು. ಹಾಗೆಯೇ, ಕ್ಯಾನ್ಸರ್ನಿಂದ ಬಳಲುತ್ತಿದ್ದ ತಂದೆಗೆ ಚಿಕಿತ್ಸೆ ಕೊಡಿಸಲು ಹಣ ಬೇಕಿತ್ತು. ಹೀಗಾಗಿ, ಯುವತಿಗೆ ಬ್ಲ್ಯಾಕ್ಮೇಲ್ ಮಾಡಿದ್ದೆ’ ಎಂದು ಆರೋಪಿ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದರು.
ಉಲ್ಲಾಳದ ನಿವಾಸಿಯಾದ ಆತ, ಪಿಯುಸಿಯಲ್ಲಿ ಅನ್ನುತ್ತೀರ್ಣಗೊಂಡಿದ್ದ. ಎಷ್ಟೇ ಹುಡುಕಿದರೂ ಆತನಿಗೆ ಕೆಲಸವೂ ಸಿಕ್ಕಿರಲಿಲ್ಲ ಎಂದು ಪೊಲೀಸರು ಹೇಳಿದರು.