ಶ್ರವಣಬೆಳಗೊಳ: ಪಟ್ಟಣದ ವಿಂಧ್ಯಗಿರಿಯ ಬಾಹುಬಲಿ ಬೆಟ್ಟದಲ್ಲಿ ಅಖಿಲ ಕರ್ನಾಟಕ ಮಹಿಳಾ ಒಕ್ಕೂಟವು ಭಾನುವಾರ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕವನ್ನು ಆಯೋಜಿಸಿತ್ತು.
ವೈರಾಗ್ಯ ಮೂರ್ತಿಗೆ ಕ್ಷೇತ್ರದ ಪೀಠಾಧಿಪತಿಗಳಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಮಹಾಮಸ್ತಕಾಭಿಷೇಕಕ್ಕೆ ಅಸಂಖ್ಯ ಜನರು ಸಾಕ್ಷಿಯಾದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ದೇಶದ ನಾನಾ ರಾಜ್ಯಗಳಿಂದ ಬಂದ ಭಕ್ತರು ಬೆಳಿಗ್ಗೆಯಿಂದಲೇ ಸಾಲುಸಾಲಾಗಿ ಹಳದಿ, ಕೇಸರಿ, ವಸ್ತ್ರವನ್ನು ಧರಿಸಿ ಬಾಹುಬಲಿ ಬೆಟ್ಟ ಏರಿದ ದೃಶ್ಯ ಮನೋಹರವಾಗಿತ್ತು.
ಪೂಜೆಯಲ್ಲಿ ಒಕ್ಕೂಟದ ಗೌರವ ಅಧ್ಯಕ್ಷೆ, ಶ್ರೀಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ವೀರೇಂದ್ರ ಹೆಗ್ಗಡೆ ಕುಟುಂಬ ವರ್ಗದವರು ಕ್ಷೀರಾಭಿಷೇಕ ನೆರವೇರಿಸಿದರು. ಮಸ್ತಕಾಭಿಷೇಕದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು.