ಆನೇಕಲ್: ತಾಲ್ಲೂಕಿನ ಸರ್ಜಾಪುರ ಸಮೀಪದ ಬಿಲ್ಲಾಪುರದ ಸಿಲ್ವರ್ ಕ್ರಸ್ಟ್ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕಲುಷಿತ ನೀರಿನ ಸೇವನೆಯಿಂದ ಮಹಿಳೆಯರು ಸೇರಿದಂತೆ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.
ಶನಿವಾರ ಕಾರ್ಖಾನೆಯಲ್ಲಿ ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ನೌಕರರು ಅಸ್ವಸ್ಥಗೊಂಡಿದ್ದರು.
15ಕ್ಕೂ ಹೆಚ್ಚು ಮಹಿಳೆಯರು ರಕ್ತದ ವಾಂತಿ ಮಾಡಿಕೊಂಡಿದ್ದರಿಂದ ಅತ್ತಿಬೆಲೆ ಹಾಗೂ ಸರ್ಜಾಪುರ ಆಸ್ಪತ್ರೆಗಳಿಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು.
ಸೋಮವಾರ 100ಕ್ಕೂ ಹೆಚ್ಚು ಕಾರ್ಮಿಕರು ಕೆಲಸದ ಸಂದರ್ಭದಲ್ಲಿ ಅಸ್ವಸ್ಥಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ನೌಕರರೊಬ್ಬರ ಸಂಬಂಧಿಕರಾದ ವೆಂಕಟೇಶ್ ದೂರಿದರು.
ನೀರಿನ ಟ್ಯಾಂಕಿನಲ್ಲಿ ಹಾವು ಸತ್ತಿರುವುದರಿಂದ ನೀರು ವಿಷಪೂರಿತವಾಗಿದೆ ಎಂದು ಕಾರ್ಮಿಕರು ಶಂಕಿಸಿದ್ದಾರೆ.
ಪರಿಸ್ಥಿತಿಯ ತೀವ್ರತೆಯನ್ನು ಅರಿತ ತಹಶೀಲ್ದಾರ್ ಲಕ್ಷ್ಮಿಸಾಗರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಟಿ.ಕೆ.ರಮೇಶ್, ಸಬ್ಇನ್ಸ್ಪೆಕ್ಟರ್ ನವೀನ್ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಜ್ಞಾನಪ್ರಕಾಶ್ ಆಸ್ಪತ್ರೆಗೆ ತೆರಳಿ ಅಸ್ವಸ್ಥರಿಂದ ಮಾಹಿತಿ ಪಡೆದರು.
ಕಾರ್ಖಾನೆಯ ಆಡಳಿತ ಮಂಡಳಿಯ ಸಭೆ ನಡೆಸಿ, ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸುವಂತೆ ಸೂಚಿಸಿದರು.
ಕಾರ್ಖಾನೆಯಲ್ಲಿ ಕುಡಿಯುವ ನೀರು, ಮೂಲಸೌಲಭ್ಯ ಕಲ್ಪಿಸುವಂತೆ ನೌಕರರು ಅಧಿಕಾರಿಗಳನ್ನು ಒತ್ತಾಯಿಸಿದರು.