ಚಿಂಚೋಳಿ: ತಾಲ್ಲೂಕಿನ ಕೋಡ್ಲಿ ತಾಂಡಾದಲ್ಲಿ ಗುರುವಾರ ಸಂಜೆ ಸಂಭವಿಸಿದ ಅಗ್ನಿ ಅವಘಡದಿಂದ 10ಕ್ಕೂ ಹೆಚ್ಚು ಮೇವಿನ ಬಣವೆಗಳು, ಒಂದು ಎತ್ತಿನ ಬಂಡಿ ಹಾಗೂ ಅಪಾರ ಪ್ರಮಾಣದ ಉರುವಲು ಕಟ್ಟಿಗೆಗಳು ಭಸ್ಮವಾಗಿವೆ.
ತಾಂಡಾ ನಿವಾಸಿಗಳ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ. ವಿದ್ಯುತ್ ಪರಿವರ್ತಕದಿಂದ ಹೊತ್ತಿಕೊಂಡ ಕಿಡಿಗಳು ಬಿರುಗಾಳಿಯಲ್ಲಿ ತೂರಿ ಉರುವಲು ಕಟ್ಟಿಗೆಗೆ ತಾಗಿತು. ಗಾಳಿಯಿಂದಾಗಿ ಮುಂದಕ್ಕೆ ವ್ಯಾಪಿಸಿ ಮೇವಿನ ಬಣವೆಗಳಿಗೂ ಪ್ರವಹಿಸಿತು. ಅಷ್ಟರಲ್ಲಿ ಸ್ಥಳೀಯರು ನೀರು ಬಳಸಿ ಬೆಂಕಿ ನಂದಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. 35 ನಿಮಿಷಗಳ ನಂತರ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹತೋಟಿಗೆ ತಂದರು.
‘ತಾಂಡಾದಲ್ಲಿ ವಿದ್ಯುತ್ ತಂತಿಗಳು ಎಲ್ಲೆಂದರಲ್ಲಿ ನೇತಾಡುತ್ತಿವೆ. ಬಿರುಗಾಳಿಯಿಂದ ಒಂದಕ್ಕೊಂದು ಸಂಧಿಸಿವೆ. ಆಗ ಕಿಡಿ ಹೊತ್ತಿಕೊಂಡು ವಿದ್ಯುತ್ ಪರಿವರ್ತಕದ ಬಳಿ ಬೆಂಕಿ ಹೊಮ್ಮಿತು. ‘ಜೆಸ್ಕಾಂ’ ಶಾಖಾಧಿಕಾರಿಗೆ ಮತ್ತು ಸಿಬ್ಬಂದಿಗೆ ಸ್ಥಳೀಯರು ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ’ ಎಂದು ಸ್ಥಳೀಯರಾದ ಅಶೋಕ ಚವಾಣ ತಿಳಿಸಿದರು.
ಘಟನೆಯಿಂದ ತಾಂಡಾದ ನಿವಾಸಿಗಳು ಭೀತಿಗಳಲ್ಲಿ ಭೀತ ಉಂಟಾಯಿತು. ಮನೆಯಿಂದ ಮನೆಗೆ ಬೆಂಕಿ ಹೊತ್ತಿಕೊಳ್ಳುವ ಸಂಭವ ಇದ್ದ ಕಾರಣ, ಮಹಿಳೆಯರು, ಮಕ್ಕಳು ಚೀರಾಡುತ್ತ ಹೊರಗೆ ಓಡಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಡಾ.ಉಮೇಶ ಅವರು, ‘ಘಟನೆಗೆ ಕಾರಣ ತಿಳಿದು, ‘ಜೆಸ್ಕಾಂ’ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಮನವಿ ಮಾಡಲಾಗುವುದು‘ ಎಂದರು.