ಕ್ವಾಲಲಂಪೂರ್, ಜೂನ್ 1– ಆಗ್ನೇಯ ಏಷ್ಯಾದಲ್ಲಿ ಚೀನಾ ತನ್ನ ಪ್ರಭಾವ ವಲಯವನ್ನು ಸೃಷ್ಟಿಸಲು ಯತ್ನಿಸುತ್ತಿದೆ. ಇದು ಅಪಾಯಕಾರಿ ಪ್ರವೃತ್ತಿ ಎಂದು ಭಾರತದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಒತ್ತಿ ಹೇಳಿದರು.
ಮಹಿಳಾ ವಕೀಲರ ಸಮಾವೇಶ: ಮೂಲಹಕ್ಕುಗಳ ಜಾರಿಗೆ ತಕ್ಕ ಪ್ರಜ್ಞೆ ಬೆಳೆಸಲು ಕರೆ
ಬೆಂಗಳೂರು, ಜೂನ್ 1– ಸಂವಿಧಾನವು ಪ್ರಜೆಗಳಿಗೆ ನೀಡಿದ ಮೂಲಭೂತ ಹಕ್ಕುಗಳ ಪೂರ್ಣ ಪ್ರಯೋಜನ ಅವರಿಗೆ ದೊರೆಯುವಂತಾಗಲು ಅವಶ್ಯವಾದ ಸಮಾಜ ಪ್ರಜ್ಞೆ ಮೂಡಿಸುವಂತೆ ರಾಜ್ಯಪಾಲ ಶ್ರೀ ಜಿ.ಎಸ್. ಪಾಠಕ್ ಅವರು ಇಂದು ರಾಷ್ಟ್ರದ ಮಹಿಳಾ ವಕೀಲರಿಗೆ ಕರೆ ನೀಡಿದರು.
‘ಎಳೆಯ ಪ್ರಜಾತಂತ್ರ, ಗಲಭೆಗೊಂದಲಗಳಿಲ್ಲದೆ ಪ್ರಬುದ್ಧ ವಿಧಾನವಾಗಿ ಬೆಳೆಯಲು, ಮಹಿಳಾ ವಕೀಲರುಗಳಂಥವರ ಸಕ್ರಿಯ ಸಹಕಾರ ಸಮಾಜಕ್ಕೆ ಆಗತ್ಯ’ ಎಂದು ಅವರು ಹೇಳಿದರು.
ಭಾರತ ಮಹಿಳಾ ನ್ಯಾಯವಾದಿಗಳ ಫೆಡರೇಷನ್ನ ತೃತೀಯ ಅಧಿವೇಶನವನ್ನು ರಾಜ್ಯಪಾಲರು ಇಂದು ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಉದ್ಘಾಟಿಸಿದರು.
ದತ್ತು ಸ್ವೀಕಾರ ವಿಧೇಯಕ, ಮುಸಲ್ಮಾನ್ ಕಾನೂನಿನ ಪ್ರಕಾರ ಮಹಿಳೆಯರ ಸ್ಥಾನ, ಮಾನವ ಹಕ್ಕುಗಳ ಕುರಿತ ವಿಶ್ವಸಂಸ್ಥೆ ಸಮಾವೇಶಗಳ ಶಿಫಾರಸುಗಳು– ಇವಿಷ್ಟು ಚರ್ಚಿಸಲ್ಪಡುವ ವಿಷಯಗಳು.