ಸವಣೂರ: ನಗರದ ಹೊರವಲಯದ ಮೋತಿ ತಲಾಬ್ ಕೆರೆಗೆ ವರದಾ ನದಿಯಿಂದ ನೀರು ಹರಿಸುವ ಪ್ರಕ್ರಿಯೆಗೆ ಮತ್ತೆ ಚಾಲನೆ ಸಿಕ್ಕಿದೆ.
ಕಳೆದೆರಡು ದಿನಗಳಿಂದ ವರದಾ ನದಿ ನೀರನ್ನು ಕೆರೆಗೆ ತುಂಬಿಸಲಾಗುತ್ತಿದೆ. ಅದರಿಂದ ಈ ಭಾಗದ ಜನರಲ್ಲಿ ಮಂದಹಾಸ ಮೂಡಿದೆ. ವರದಾ ನದಿಯಿಂದ ಮೋತಿ ತಲಾಬ್ಗೆ ನೀರು ಸರಬರಾಜು ಮಾಡುವ ಪಂಪ್ಸೆಟ್ ಇತ್ತೀಚೆಗೆ ಕೆಟ್ಟು ಹೋಗಿತ್ತು. ಅದನ್ನು ಸ್ಥಳೀಯ ಶಾಸಕ ಬಸವರಾಜ ಬೊಮ್ಮಾಯಿ ₹28 ಲಕ್ಷ ವೆಚ್ಚದಲ್ಲಿ ದುರಸ್ತಿ ಮಾಡಿಸಿದ್ದು, ಇದೀಗ ಮತ್ತೆ ನೀರು ಪೂರೈಕೆ ಆರಂಭಗೊಂಡಿದೆ.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಖಲಂದರ ಅಕ್ಕೂರ, ಉಪಾಧ್ಯಕ್ಷೆ ರಾಜೇಶ್ವರಿ ಬುಶೇಟ್ಟಿ, ಅನ್ವರಸಾಬ್ ಕಿಲ್ಲೇದಾರ್, ಮಕ್ಬೂಲ್ ಮಕಾನದಾರ್, ರಬ್ಬಾನಿ ದುಕಾನದಾರ್, ರಾಮಣ್ಣಾ ಸಂಕ್ಲಿಪೂರ, ಸಂಗಪ್ಪ ಏರೇಶಿಮಿ ಇದ್ದರು.
ಮನವಿ ಸಲ್ಲಿಕೆ
ಸವಣೂರ: ‘ಮೋತಿ ತಲಾಬ್ಗೆ ಮಳೆ ನೀರು ಸೇರುವ ಕಾಲುವೆಯಲ್ಲಿ ಗಿಡ–ಗಂಟಿಗಳು ಬೆಳೆದಿದ್ದು, ಹೂಳು ತುಂಬಿದೆ. ಅದನ್ನು ತೆಗೆಸುವ ಮೂಲಕ ಮಳೆ ನೀರು ಸರಾಗವಾಗಿ ಹರಿದು ಬಂದು ಕೆರೆ ಸೇರಲು ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ತಾಲ್ಲೂಕು ಘಟಕದ ಅಧ್ಯಕ್ಷ ಫಕೀರಪ್ಪ ಹರಿಜನ ಹಾನಗಲ್ನ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
‘ಕಾಲುವೆಗಳಲ್ಲಿ ಸಾಕಷ್ಟು ಹೂಳು ತುಂಬಿದೆ. ಸ್ವಲ್ಪ ಬಿರುಸಿನ ಮಳೆಯಾಗಿ ನೀರು ಹರಿದು ಬಂದರೆ ಕಾಲುವೆಗಳ ಒಡ್ಡು ಒಡೆದು ಬೇರೆಡೆ ಹರಿದು ಪೋಲಾಗುತ್ತಿದೆ. ಅದನ್ನು ತಡೆಯಲು ಕ್ರಮಕೈಗೊಳ್ಳಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಕೆ ವೇಳೆ, ಮುಲ್ಲಾನಾ ಡಂಬಳ, ನಿಸಾರ್ಅಹ್ಮದ್ ಮಕಾನದಾರ್, ರಂಗಪ್ಪ ಹೆಬ್ಬಾಳ, ಕೆ.ಎಂ.ನಾಯಕ್, ಜಾಕೀರ್, ನಾಗಪ್ಪ ಕುಂದೂರ, ಫಕ್ಕೀರಪ್ಪ ಬಾದಾಮಿ, ಖಲಂದರ್, ಎಂ.ಎ.ಕೋಳಿವಾಡ, ಶಂಕರ, ನಿಂಗಪ್ಪ, ಎಂ.ಬಿ.ಬಡ್ಡಿ ಇದ್ದರು.